ಜಯಪುರ : ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದಿನಾಂಕ 21.09.2025 ರಿಂದ 2.10.2025 ರವರೆಗೆ ಶ್ರೀ ಕ್ಷೇತ್ರ ಜಯಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಶರನ್ನವರಾತ್ರಿ ಕಾರ್ಯಕ್ರಮ ನಡೆಸಲಾಗುವುದು ಎಂದು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಡಿ ಬಿ ರಾಜೇಂದ್ರ ಪತ್ರಿಕೆಗೆ ತಿಳಿಸಿದರು.
ದಿನಾಂಕ 21 ಭಾನುವಾರ ಅಮಾವಾಸ್ಯೆ ಯಂದು ಶ್ರೀ ದುರ್ಗಾಪರಮೇಶ್ವರಿಗೆ ಕಷಾಯ ತೀರ್ಥ ಅಭಿಷೇಕ ಹಾಗೂ ಬಾಣಂತಿ ಅಲಂಕಾರ ಮಾಡಲಾಗುವುದು. 22ರಿಂದ ಪ್ರಾರಂಭವಾಗುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದಿನಂಪ್ರತಿ ದೇವಸ್ಥಾನದಲ್ಲಿ ಕಲ್ಪೋಕ್ತ ಪೂಜೆ, ಅರ್ಚನೆ, ಚಂಡಿಕಾ ಪಾರಾಯಣ ಹಾಗೂ ಸಂಜೆ ದೀಪಾ ನಮಸ್ಕಾರ ನಡೆಯಲಿದೆ.
ದಿನಾಂಕ 22ನೇ ಸೋಮವಾರ ಪಾಡ್ಯ ದೇವಿಗೆ ಶೈಲಪುತ್ರಿ ಅಲಂಕಾರ ಹಾಗೂ ಗಣಪತಿ ಹೋಮ ನಡೆಯಲಿದೆ. 23ನೇ ಮಂಗಳವಾರ ಬಿದಿಗೆ ಶ್ರೀದೇವಿಗೆ ಬ್ರಹ್ಮಚಾರಿಣಿ ಅಲಂಕಾರ ಹಾಗೂ ಶ್ರೀಸೂಕ್ತ ಹೋಮ, 24ನೇ ಬುಧವಾರ ತದಿಗೆ ಶ್ರೀದೇವಿಗೆ ಚಂದ್ರಘಂಟಾ ಅಲಂಕಾರ ಹಾಗೂ ದುರ್ಗಾ ಹೋಮ, 25ನೇ ಗುರುವಾರ ಚೌತಿಯಂದು ಶ್ರೀದೇವಿಗೆ ಕುಷ್ಮಾಂಡಿನಿ ಅಲಂಕಾರ ಹಾಗೂ ಗಣಪತಿ ಹೋಮ, ದಿನಾಂಕ 26ನೇ ಶುಕ್ರವಾರ ಪಂಚಮಿಯಂದು ಸ್ಕಂದಮಾತಾ ಅಲಂಕಾರ ಹಾಗೂ ಲಲಿತಾ ಹೋಮ, ದಿನಾಂಕ 27ನೇ ಶನಿವಾರ ಸ್ಕಂದಮಾತಾ ಅಲಂಕಾರ ಹಾಗೂ ಲಕ್ಷ್ಮೀನಾರಾಯಣ ಹೃದಯ ಹೋಮ, 28ನೇ ಭಾನುವಾರ ಮೂಲದುರ್ಗ ಅಲಂಕಾರ ಮತ್ತು ಸುಬ್ರಹ್ಮಣ್ಯ ಹೋಮ, 29 ನೇ ಸೋಮವಾರ ಸಪ್ತಮಿಯಂದು ಮಹಾಗೌರಿ ಅಲಂಕಾರ ಹಾಗೂ ಸರಸ್ವತಿ ಹೋಮ, 30ನೇ ಮಂಗಳವಾರ ಸಪ್ತಮಿಯಂದು ಸರಸ್ವತಿ ಅಲಂಕಾರ ಹಾಗೂ ದುರ್ಗಾ ಹೋಮ ನಡೆಯಲಿದೆ.
ದಿನಾಂಕ 1 ಹಾಗೂ 2ರಂದು ಚಂಡಿಕಾ ಹೋಮ ನಡೆಯಲಿದ್ದು, 2ನೇ ತಾರೀಕು ಬುಧವಾರ ದಶಮಿಯಂದು ಸಂಜೆ ಆರು ಗಂಟೆಗೆ ಜಯಪುರ ರಾಜಭೀದಿಯಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕೆಯ ಮುಖಾಂತರ ಮನವಿ ಮಾಡಿದರು.
ವರದಿ: ಶಶಿ ಬೆತ್ತದಕೊಳಲು
