ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿ ಹಿರೇಶಿಗರು ಗ್ರಾಮದ ರಸ್ತೆ ಗುಂಡಿಗಳಿಂದ ಕೂಡಿದ್ದ 1.5 ಕಿ.ಮೀ ರಸ್ತೆಯನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಪಡಿಸಿಕೊಂಡಿದ್ದಾರೆ
ರಸ್ತೆ ದುರಸ್ತಿ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರು ದೂರಿದರು. ಈ ಹಿನ್ನೆಲೆಯಲ್ಲಿ ಚಂದಾ ಸಂಗ್ರಹಿಸಿ ರಸ್ತೆ ದುರಸ್ತಿಗೆ ಮುಂದಾದ ಹಿರೇಶಿಗರು ಗ್ರಾಮಸ್ಥರು
ಹಾಳಾದ ಈ ರಸ್ತೆ ತುಂಬಾ ಗುಂಡಿಗಳಿಂದ ಕೂಡಿದ್ದು, ಮಳೆ ಬಂದಾಗ ರಸ್ತೆಯೇ ಕಾಣದೆ ಕೆಸರು ಗದ್ದೆಯಂತಾಗುತ್ತಿತ್ತು. ಇಂತಹ ರಸ್ತೆಯಲ್ಲಿ ಬೈಕ್ ಸವಾರರು ಆಯತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಕೆಲ ವಾಹನ ಚಾಲಕರು ಈ ರಸ್ತೆ ಮೂಲಕ ಸಾಗಲು ಹರಸಾಹಸ ಪಡುವುದು ಸಾಮಾನ್ಯ. ಇನ್ನು ಟ್ರ್ಯಾಕ್ಟರ್ಗಳು ರಸ್ತೆಯಲ್ಲಿಯೇ ಸಿಲುಕಿ ತೋಟ ಗದ್ದೆಗಳನ್ನು ತಲುಪದೆ ತೊಂದರೆ ಅನುಭವಿಸುವುದು ನಿತ್ಯ ಗೋಳಾಟವಾಗಿತ್ತು ಎಂದು ರೈತರು ಬೇಸರದಿಂದ ತಿಳಿಸಿದರು.
ಇದರಿಂದ ಬೇಸತ್ತು ಜೆಸಿಬಿ ಯಂತ್ರದಿಂದ ಟ್ರ್ಯಾಕ್ಟರ್ ನಿಂದ ಮಣ್ಣು ಹೊಡೆಸಿ ಸದ್ಯ ತಾತ್ಕಾಲಿಕವಾಗಿ ರಸ್ತೆ ದುರಸ್ತಿಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಂಡಿರುವುದಾಗಿ ಹಿರೇಶಿಗರು ಗ್ರಾಮಸ್ಥರು ತಿಳಿಸಿದರು.
ಪಿಡಬ್ಲ್ಯುಡಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಶಾಶ್ವತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ತೋಟದಲ್ಲಿ ಬೆಳೆದ ಫಸಲು ಸಾಗಾಟಕ್ಕೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು.
