ಚಿಕ್ಕಮಗಳೂರು : ಜಿಲ್ಲೆಯ ಶಿವನಿ, ಅಜ್ಜಂಪುರ, ಬೀರೂರು, ಕಡೂರು ಹಾಗೂ ದೇವನೂರು ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ನೈರುತ್ಯ ರೈಲ್ವೆಯು ಹೊಸಪೇಟೆ ಹಾಗೂ ಅರಸೀಕೆರೆ ನಡುವೆ ಕಾಯ್ದಿರಿಸದ ವಿಶೇಷ ಡೆಮು ರೈಲು ಸೇವೆಯನ್ನು ಆರಂಭಿಸಲು ಅಧಿಸೂಚನೆ ಹೊರಡಿಸಿದೆ.
ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ 8 ಬೋಗಿಗಳ ವಿಶೇಷ ರೈಲು ಸೇವೆಯನ್ನು ಜಾರಿಗೆ ತರಲಾಗುತ್ತಿದೆ. ಈ ರೈಲು ಸೇವೆಯು 2026ರ ಆಗಸ್ಟ್ 28ರಿಂದ ನವೆಂಬರ್ 27ರವರೆಗೆ ವಾರದಲ್ಲಿ ಐದು ದಿನಗಳು (ಸೋಮವಾರದಿಂದ ಶುಕ್ರವಾರದವರೆಗೆ) ಕಾರ್ಯನಿರ್ವಹಿಸಲಿದ್ದು, ಶನಿವಾರ ಮತ್ತು ಭಾನುವಾರ ಸಂಚಾರ ಇರುವುದಿಲ್ಲ.
ಹೊಸಪೇಟೆಯಿಂದ ಅರಸೀಕೆರೆಗೆ ತೆರಳುವ ರೈಲು ಸಂಖ್ಯೆ 07343 ಪ್ರತಿದಿನ ಬೆಳಿಗ್ಗೆ 6:30ಕ್ಕೆ ಹೊಸಪೇಟೆಯಿಂದ ಹೊರಟು ದಾವಣಗೆರೆ, ಚಿಕ್ಕಜಾಜೂರು ಮಾರ್ಗವಾಗಿ ಮಧ್ಯಾಹ್ನ 11:40ಕ್ಕೆ ಶಿವನಿ, 11:51ಕ್ಕೆ ಅಜ್ಜಂಪುರ, 12:09ಕ್ಕೆ ಬೀರೂರು, 12:21ಕ್ಕೆ ಕಡೂರು ಹಾಗೂ 12:43ಕ್ಕೆ ದೇವನೂರು ನಿಲ್ದಾಣ ತಲುಪಿ, ಅಂತಿಮವಾಗಿ ಮಧ್ಯಾಹ್ನ 2:20ಕ್ಕೆ ಅರಸೀಕೆರೆ ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07344 ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು ಮಧ್ಯಾಹ್ನ 2:44ಕ್ಕೆ ದೇವನೂರು, 3:00 ಗಂಟೆಗೆ ಕಡೂರು, 3:10ಕ್ಕೆ ಬೀರೂರು, 3:28ಕ್ಕೆ ಅಜ್ಜಂಪುರ ಹಾಗೂ 3:38ಕ್ಕೆ ಶಿವನಿ ನಿಲ್ದಾಣದ ಮೂಲಕ ಸಂಚರಿಸಿ ರಾತ್ರಿ 9:30ಕ್ಕೆ ಹೊಸಪೇಟೆ ತಲುಪಲಿದೆ.
ಈ ರೈಲು ಸಂಚಾರದಿಂದಾಗಿ ತರೀಕೆರೆ, ಕಡೂರು ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ಪ್ರಯಾಣಿಸಲು ಸುಲಭ ಹಾಗೂ ಕಡಿಮೆ ವೆಚ್ಚದ ಸಂಪರ್ಕ ಕಲ್ಪಿಸಿದಂತಾಗಿದೆ.
