ಉಡುಪಿ: ಉಡುಪಿ ನಗರದ ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7 ಗಂಟೆಯಿಂದ 9.30 ತನಕ ಅಂಬುಲೆನ್ಸ್ ಸಿಗದೆ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದಾಗ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ರೋಗಿಯ ಸಂಬಂಧಿಕರು 108 ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಅಂಬುಲೆನ್ಸ್ ಗಳು ಕೂಡ ಲಭ್ಯವಿರದಿರುವುದರಿಂದ ರೋಗಿಯ ಕಡೆಯವರು ವಿಶು ಶೆಟ್ಟಿ ಅವರು ಸಂಪರ್ಕಿಸಿದ್ದಾರೆ. ವಿಶು ಶೆಟ್ಟಿ ಕೂಡ ಖಾಸಗಿ ಆಂಬುಲೆನ್ಸ್ ಸಂಪರ್ಕಿಸಿ ಸಿಗದೇ ಇರುವುದರಿಂದ ರೋಗಿ ತೀರ ಚಿಂತಾಜನಕ ಪರಿಸ್ಥಿತಿ ತಲುಪಿದ್ದರಿಂದ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋ ಗೆ ಮಂಚ ಇರಿಸಿ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಬೇಕಾಯಿತು.
ಕಳೆದ ಒಂದು ವರುಷದಿಂದ 108 ಅಂಬುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ನಾನು ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಈ ಘಟನೆಯಲ್ಲಿ ಕೂಡ ಎರಡೂವರೆ ಗಂಟೆ ಅಂಬುಲೆನ್ಸ್ ಸಿಗದೇ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದ್ದು ವಿಧಿ ಇಲ್ಲದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು. ಇನ್ನಾದರೂ ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಂಡು ಸಹಕರಿಸಬೇಕು. ಸಾರ್ವಜನಿಕರ ಪ್ರಾಣವನ್ನು ನಿರ್ಲಕ್ಷಿಸಬಾರದು. ಉಡುಪಿ ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಐದರಿಂದ ಆರು ಮಾತ್ರ.ತಕ್ಷಣ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
