ಬೇಲೂರು: ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿದ್ದು, ಮಲೆನಾಡು ಭಾಗದಲ್ಲಿ ಕಾಫಿ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಲೂರಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ 20 ಮೂಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಗ್ರಾಮದ ರೈತ ಮಧು ಅವರು ಕಾಫಿ ಹಣ್ಣು ಕೊಯಲು ಮಾಡಿ ಚೀಲಗಳಲ್ಲಿ ತುಂಬಿ ಮನೆಯ ಸಮೀಪದ ತೋಟದಲ್ಲಿಟ್ಟಿದ್ದರು. ಇಪ್ಪತ್ತು ಮೂಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳಗ್ಗೆ ಕಾಫಿ ಹಣ್ಣು ಒಣಗಿಸಲು ತೋಟಕ್ಕೆ ಹೋಗಿದ್ದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 1.5 ಲಕ್ಷ ರೂ. – 2 ಲಕ್ಷ ರೂ. ಮೌಲ್ಯದ ಕಾಫಿ ಹಣ್ಣುಗಳ ಕಳವಾಗಿದೆ ಎಂದು ಅಂದಾಜಿಸಲಾಗಿದೆ. ದಿನೇ ದಿನೇ ಕಾಫಿ ಕಳವು ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
