ಬೆಂಗಳೂರು: ಕರ್ನಾಟಕ ಸರ್ಕಾರವು ದೆಹಲಿಯ ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿದೆ. ಕೆ.ಸಿ. ವೇಣುಗೋಪಾಲ್ ಅವರೇ ಇಲ್ಲಿನ ಸೂಪರ್ ಸಿಎಂ. ಅವರ ಅಣತಿಯಂತೆ ಕನ್ನಡಿಗರ ಹಿತ ಬಲಿಕೊಟ್ಟು ಕೇರಳದ ನುಸುಳುಕೋರರಿಗೆ ಮಣೆ ಹಾಕಲಾಗುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೋಗಿಲು ಕ್ರಾಸ್ನ ಅಕ್ರಮ ಗುಡಿಸಲು ತೆರವು ಮತ್ತು ನಂತರದ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
ವೇಣುಗೋಪಾಲ್ ಸೂಪರ್ ಸಿಎಂ
ವೇಣುಗೋಪಾಲ್ ಕಣ್ಣುಬಿಟ್ಟರೆ ಸಾಕು, ಈ ಸರ್ಕಾರ ಮಂಡಿಯೂರುತ್ತದೆ. ಕೋಗಿಲು ಲೇಔಟ್ನಲ್ಲಿ ಅಕ್ರಮ ಜಾಗ ಖಾಲಿ ಮಾಡಿಸಿದ ನಂತರ ವೇಣುಗೋಪಾಲ್ ಒಂದು ಟ್ವೀಟ್ ಮಾಡಿದಾಕ್ಷಣ ಇಡೀ ಸರ್ಕಾರವೇ ನಡುಗುತ್ತಿದೆ. ಕನ್ನಡಿಗರನ್ನು ಬಿಟ್ಟು ಕೇರಳದಿಂದ ಬಂದವರಿಗೆ ಮನೆ ನೀಡಲು ಸರ್ಕಾರ ಹಪಹಪಿಸುತ್ತಿದೆ ಎಂದು ಟೀಕಿಸಿದರು.
ಕರ್ನಾಟಕಕ್ಕೆ ‘ಪಶ್ಚಿಮ ಬಂಗಾಳ’ದ ಆತಂಕ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅವರ ಮೃದು ಧೋರಣೆಯಿಂದಾಗಿ ಕೋಟ್ಯಂತರ ಬಾಂಗ್ಲಾ ನುಸುಳುಕೋರರು ತುಂಬಿಕೊಂಡಿದ್ದಾರೆ. ಈಗ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಂಗಳೂರು, ಉಡುಪಿ, ಭಟ್ಕಳ ಮತ್ತು ಬೆಂಗಳೂರಿನ ಹೆದ್ದಾರಿ ಪಕ್ಕದ ಸರ್ಕಾರಿ ಜಮೀನುಗಳನ್ನು ಕೇರಳದಿಂದ ಬಂದ ನುಸುಳುಕೋರರು ಅಕ್ರಮವಾಗಿ ಅತಿಕ್ರಮಿಸುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಮತಬ್ಯಾಂಕ್ ರಾಜಕಾರಣದ ಪಾಪದ ಕೂಸು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರಿಗಿಲ್ಲದ ಮನೆ ಕೇರಳದವರಿಗೇಕೆ?
ನಮ್ಮ ರಾಜ್ಯದಲ್ಲಿ 9 ಲಕ್ಷ ಮನೆಗಳ ಬೇಡಿಕೆಯಿದೆ. 6 ಲಕ್ಷ ಕನ್ನಡಿಗರಿಗೆ ಇನ್ನು ಮನೆ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ನೆಲದವರನ್ನು ಬಿಟ್ಟು, ಕೇರಳದಿಂದ ಬಂದ ನುಸುಳುಕೋರರಿಗೆ ಜಾಗ ಮತ್ತು ಮನೆ ನೀಡಲು ಹೊರಟಿರುವುದು ಎಂತಹ ನ್ಯಾಯ? ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ಪ್ರಶ್ನಿಸಿದರು.
ಕಾಂಗ್ರೆಸ್-ಕಮ್ಯುನಿಸ್ಟ್ ಅಪವಿತ್ರ ಮೈತ್ರಿ
ಹಿಂದೆ ಬಂಗಾಳವನ್ನು ಕಮ್ಯುನಿಸ್ಟರು ಹಾಳು ಮಾಡಿದರು, ಈಗ ಮಮತಾ ಬ್ಯಾನರ್ಜಿ ಗಡಿಗೆ ಫೆನ್ಸಿಂಗ್ ಹಾಕಲು ಜಾಗ ನೀಡುತ್ತಿಲ್ಲ. ಅದೇ ಮಾದರಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.
