ಹಾಸನ: ಜನಪ್ರಿಯ ಆಸ್ಪತ್ರೆ, ಹಾಸನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಐಎಂಎ ಹಾಸನ ಆಶ್ರಯದಲ್ಲಿ ಶುಕ್ರವಾರ ವಿಶ್ವ ಹೃದಯ ದಿನದ ಅಂಗವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ವಾಕಥಾನ್ಗೆ ನಗರದ ಹೇಮಾವತಿ ಪ್ರತಿಮೆ ಬಳಿ ಚಾಲನೆ ನೀಡಿದ್ದರು.
ದಿನ ಬೆಳಗಾದರೇ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಸಮಯಕ್ಕೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು, ಪ್ರತಿದಿನ ಕನಿಷ್ಠ 5 ಕಿ.ಮೀ. ನಡೆಯುವುದು, ಎಲ್ಲಕ್ಕಿಂತ ಮುಖ್ಯವಾಗಿ ಮದ್ಯಪಾನ, ಧೂಮಪಾನವನ್ನು ಬಿಡುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ‘ಹೃದಯದ ಆರೋಗ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಚಿಕ್ಕ ವಯಸ್ಸಿನ ಯುವಕರಲ್ಲಿ ಹೃದಯ ಸಂಬಂಧಿಸಿದ ಕಾಯಿಲೆ ಬರುತ್ತಿದ್ದು, ನಿತ್ಯ ವ್ಯಾಯಾಮ ಮಾಡುವುದರ ಜೊತೆಗೆ ಆಹಾರ ಪದ್ಧತಿಯಲ್ಲೂ ಕೆಲ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ’ ಎಂದರು.
ಜನಪ್ರಿಯ ಫೌಂಡೇಶನ್ನ ಮುಖ್ಯಸ್ಥ ಡಾ.ವಿ.ಕೆ. ಅಬ್ದುಲ್ ಬಷೀರ್ ಮಾತನಾಡಿ, ‘ಮನುಷ್ಯನ ಪ್ರಮುಖ ಅಂಗ ಎಂದರೆ ಹೃದಯ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮನುಷ್ಯನ ಜೀವ ಇದೆ ಎಂದು ಹೇಳುವುದಕ್ಕೆ ಈ ಹೃದಯ ಪ್ರಮುಖ’ ಎಂದರು.
ಮೇಯರ್ ಗಿರೀಶ್ ಚನ್ನವೀರಪ್ಪ ಮಾತನಾಡಿ, ‘ಇಂದಿನ ತಾಂತ್ರಿಕ ಯುಗದಲ್ಲಿ ಆಹಾರದ ಬಗ್ಗೆ ಬಹುತೇಕರು ಕಾಳಜಿವಹಿಸುತ್ತಿಲ್ಲ. ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೂ ಆರೋಗ್ಯ ಚೆನ್ನಾಗಿ ಇಲ್ಲದಿದ್ದರೇ ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ಆರೋಗ್ಯದ ಕಡೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ‘ಹೃದಯಾಘಾತ ಆತಂಕ ಮೂಡಿಸಿದೆ. ಈ ಬಗ್ಗೆ ಅರಿವು ಮೂಡಿಸಲು ವಾಕಥಾನ್ ಮಾಡಲಾಗುತ್ತಿದೆ. ಆಹಾರ ಶೈಲಿಯಲ್ಲಿ ಬದಲಾವಣೆ, ನಿತ್ಯ ಸರಳ ವ್ಯಾಯಾಮ ಮಾಡಿದರೇ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು’ ಎಂದು ಸಲಹೆ ನೀಡಿದರು.
ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಅನೇಕರು ಸಾವನಪ್ಪಿರುವುದು ಸುದ್ದಿ ಆಯಿತು. ಈಗ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯದು’ ಎಂದು ಪುಷ್ಪಗಿರಿ ಮಠದ ಮಠಾಧೀಶ ಸೋಮಶೇಖರ ಸ್ವಾಮೀಜಿ ಹೇಳಿದರು. ‘ನಮ್ಮ ಹೃದಯ ಚೆನ್ನಾಗಿರಬೇಕಾದರೇ ಮನಸ್ಸು ಕೂಡ ಉತ್ತಮವಾಗಿರಬೇಕು. ಮನಸ್ಸಿನೊಳಗೆ ಪ್ರೀತಿ ವಿಶ್ವಾಸ ಬೆಳೆಸಿಕೊಂಡು ಉತ್ತಮ ಆರೋಗ್ಯ ಪಡೆಯಬಹುದು. ಸಮಸ್ಯೆಯನ್ನು ಆನಂದವಾಗಿ ಸ್ವೀಕರಿಸಿದರೇ ನಮ್ಮ ಹೃದಯ ಚೆನ್ನಾಗಿರುತ್ತದೆ’ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ಕಾಯಿಲೆಯ ಆರಂಭದಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದಿನಚರಿಯಲ್ಲಿ ಪ್ರತಿದಿನ ಕೆಲ ಸಮಯ ದೇಹಕ್ಕೆ ವ್ಯಾಯಾಮ ನೀಡಿ ಆರೋಗ್ಯವನ್ನು ರಕ್ಷಿಸಿಕೊಳ್ಳಿ ಎಂದರು.
