ಚಿಕ್ಕಮಗಳೂರು: ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಮಿತಿಯ ಸಮೀಕ್ಷಾ ಸಭೆ ಸೆ.29ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷಾ ಸಭೆ ನಡೆಸುತ್ತಿದ್ದಾರೆ. ರಾಜ್ಯ, ಜಿಲ್ಲೆ, ಸೆಕ್ಟರ್, ಬೂತ್ ಹಂತಗಳಲ್ಲಿ ಸಮಿತಿಗಳನ್ನು ರಚಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಮುಂಬರುವ ಎಲ್ಲ ಹಂತದ ಚುನಾವಣೆಗಳಲ್ಲಿ ಪಕ್ಷದಿಂದ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ತಯಾರು ಮಾಡುವ ಪ್ರಯತ್ನವಾಗಿ ಜಿಲ್ಲಾವಾರು ಸಮೀಕ್ಷಾ ಸಭೆಗಳು ನಡೆಯಲಿವೆ ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ೬ ರಾಷ್ಟ್ರೀಯ ಪಕ್ಷಗಳ ಸಾಲಿನಲ್ಲಿ ಬಿಎಸ್ಪಿ ಹೆಸರಿದೆ. ಫುಲೆ, ಶಾಹು, ಪೆರಿಯಾರ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಅಡಿಯಲ್ಲಿ ಸಂವಿಧಾನವನ್ನೇ ತನ್ನ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಮಾತ್ರ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಲ್ಲಿಯವರೆಗೆ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಸಮಸ್ಯೆಗಳನ್ನು ಜೀವಂತವಾಗಿಟ್ಟು ಜನರ ಆಲೋಚನೆಗಳನ್ನು ಕೋಮುವಾದ ಮತ್ತಿತರೆ ಬೇರೆ ವಿಚಾರಗಳತ್ತ ತಿರುಗಿಸಿ ಸಮಸ್ಯೆಗಳನ್ನು ಹಾಗೆ ಉಳಿಸಿದ್ದಾರೆ ಎಂದು ದೂರಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಕೃಷ್ಣ ಮಾತನಾಡಿ, ಮನುವಾದಿ ಪಕ್ಷಗಳು ಜನರ ಮನಸ್ಸನ್ನು ಕದಡಿ ಆಟ ಆಡುತ್ತಿವೆ. ಜನರ ನಂಬಿಕೆಯನ್ನೇ ತುಷ್ಠೀಕರಿಸಿ ಅವರ ಮನಸ್ಸನ್ನು ಬೇರೆ ಕಡೆ ಸೆಳೆಯುತ್ತಿವೆ. ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಜಿಎಸ್ಟಿ ಏರಿಸಿದ್ದು ಇದೇ ಬಿಜೆಪಿ ಸರಕಾರ, ಇಳಿಸಿದ್ದು ಇವರೇ ಜನರನ್ನು ಮರುಳು ಮಾಡಲು ಸಂಭ್ರಮ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಮತಕಳವಿನ ಬಗ್ಗೆ ಆರೋಪ ಮಾಡಿದರೆ ಅದನ್ನು ತನಿಖೆ ಮಾಡಬೇಕಾದ ಚುನಾವಣಾ ಆಯೋಗ ಮುಗುಮ್ಮಾಗಿದೆ. ತನಿಖೆ ಮಾಡಿ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಿ ಎಂದು ಹೀಗೆ ಸುಮ್ಮನಿದ್ದರೆ ತಪ್ಪು ಒಪ್ಪಿಕೊಂಡಂತಲ್ಲವೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆ.ಬಿ.ಸುಧಾ, ಗಂಗಾಧರ, ಕುಮಾರ ಇದ್ದರು.
