ಹಾಸನ: ತಾಯಿ ಚಿರತೆಯಿಂದ ಬೇರ್ಪಟ್ಟಿದ್ದ ಮೂರು ಮರಿಗಳನ್ನು ಮರಳಿ ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗ್ರಾಮದ ಚೆಲುವೇಗೌಡ ಎಂಬುವವರ ಕಬ್ಬಿನ ತೋಟದಲ್ಲಿ ಅ. 2 ರಂದು ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಕಬ್ಬು ಕಟಾವು ಕಾರ್ಯ ಆರಂಭಿಸಿದಾಗ ತಾಯಿ ಚಿರತೆ ಹೆದರಿ ಮರಿಗಳನ್ನು ಅಲ್ಲೇ ಬಿಟ್ಟು ಹೋಗಿತ್ತು. ಕಬ್ಬು ಕಟಾವು ಕಾರ್ಮಿಕರು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಹಾಗೂ ಡಿಆರ್ಎಫ್ಒ ಶಂಕರ್, ಸಿಬ್ಬಂದಿ ಮರಿಗಳ ಆರೈಕೆ ಮಾಡಿ ತಾಯಿ ಜೊತೆಗೆ ಸೇರಿಸಿದ್ದಾರೆ.
