ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಶಕ್ತಿ ದೇವತೆ ದೇವೀರಮ್ಮನ ಜಾತ್ರೆಯ ಸಲುವಾಗಿ ಸಾವಿರಾರು ಭಕ್ತರು ಬೆಟ್ಟ ಹತ್ತಿದ್ದಾರೆ. ಈ ವೇಳೆ ಬೆಟ್ಟದ ಮೇಲೆ ಮೂವರು ಭಕ್ತರು ಅಸ್ವಸ್ಥರಾದ ಘಟನೆ ನಡೆದಿದೆ.
ಹೌದು .. 6 ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ಅಸ್ವಸ್ಥಗೊಂಡಿದ್ದ ಭಕ್ತರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಿಂದ ಕೆಳಗೆ ಸಾಗಿಸಿದ್ದಾರೆ. ಓರ್ವ ವ್ಯಕ್ತಿಯ ಕಾಲು ಮುರಿತವಾಗಿದ್ದರೆ, ಮತ್ತಿಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ.
ಸಮುದ್ರ ಮಟ್ಟದಿಂದ ಬರೋಬ್ಬರಿ 3,800 ಅಡಿಗೂ ಹೆಚ್ಚು ಎತ್ತರದಲ್ಲಿರುವ ದೇವೀರಮ್ಮನ ದೇಗುಲಕ್ಕೆ ತೆರಳಲು ಭಕ್ತರು ಸುಮಾರು 5-6 ಕಿ.ಮೀ. ದೂರದ ಪಿರಮಿಡ್ ಆಕಾರದ ಕಡಿದಾದ ಬೆಟ್ಟವನ್ನು ಹತ್ತಬೇಕು ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗಿದ್ದು, ಭಾರಿ ಮಳೆ ನಡುವೆಯೂ ಬೆಟ್ಟ ಏರಿ ಭಕ್ತರು ಶಕ್ತಿದೇವತೆ ದರ್ಶನ ಮಾಡುತ್ತಿದ್ದಾರೆ.
