ಚಿಕ್ಕಮಗಳೂರು: ನಿರಂತರ ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಭಾರಿ ಕುಸಿತ ಕಂಡಿದೆ. ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (KPA) ಪ್ರಕಾರ, ಭಾರತದ ಕಾಫಿ ಉತ್ಪಾದನೆಯಲ್ಲಿ 30,000 ಟನ್ ಇಳಿಕೆಯಾಗುವ ನಿರೀಕ್ಷೆಯಿದೆ. ಅರಬಿಕಾ ಮತ್ತು ರೋಬಸ್ಟಾ ಬೆಳೆಗಳ ಇಳುವರಿ ಕಡಿಮೆಯಾಗಿದ್ದು, ಮಳೆಯಿಂದ ಎಲೆ ಕೊಳೆ ರೋಗವೂ ಹೆಚ್ಚಿದೆ. ಇದು ಕಾಫಿ ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಅರಬಿಕಾ ಬೆಳೆಯನ್ನು 1,18,125 ಟನ್ ಅಂದಾಜಿಸಲಾಗಿತ್ತು. ಆದರೆ ಬೆಳೆ 1 ಲಕ್ಷದಿಂದ 1.2 ಲಕ್ಷ ಟನ್ ಸಿಗಲಿದೆ. ಹಾಗೆಯೇ ರೋಬಸ್ಟಾ ಉತ್ಪಾದನೆ 2.6 ಲಕ್ಷ ಟನ್ನಿಂದ 2.7 ಲಕ್ಷ ಟನ್ ಸಿಗಬಹುದಾಗಿದ್ದು, ನಿರೀಕ್ಷೆ 2,84,875 ಟನ್ ಇದ್ದವು ಎಂದು ತನ್ನ ಉತ್ಪಾದನಾ ಅಂದಾಜನ್ನು KPA ಚಿಕ್ಕಮಗಳೂರಿನಲ್ಲಿ ನಡೆದ 67ನೇ ವಾರ್ಷಿಕ ಮಹಾಸಭೆ ಸಂದರ್ಭ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಈ ವರ್ಷ ಮೇ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ಆರು ತಿಂಗಳು ನಿರಂತರವಾಗಿ ಸುರಿದ ಮಳೆಯ ಪರಿಣಾಮ ಕಾಫಿ ತೋಟಗಳು ತತ್ತರಿಸಿಹೋಗಿವೆ. ಹೀಗಾಗಿ ಈ ವರ್ಷ ಭಾರತದ ಕಾಫಿ ಉತ್ಪಾದನೆಯಲ್ಲಿ 30,000 ಟನ್ ಕಡಿಮೆಯಾಗಲಿದೆ ಎಂದು ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರನ್ನು ಪ್ರತಿನಿಧಿಸುವ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ (KPA) ತಿಳಿಸಿದೆ. 2025–26ರ ಸಾಲಿನಲ್ಲಿ ದೇಶದ ಕಾಫಿ ಉತ್ಪಾದನೆ 4,03,000 ಟನ್ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದು 3,73,000 ಟನ್ ತಲುಪಬಹುದು ಎಂದು KPA ಹೇಳಿದೆ.
ಕರ್ನಾಟಕದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನ 2,000ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ 400 ಕೋಟಿ – 500 ಕೋಟಿಯಷ್ಟು ಸಾಲ ಬಾಕಿಯಿದ್ದು, ಇವರಲ್ಲಿ ಅನೇಕರು ಬ್ಯಾಂಕುಗಳ ವಿವಿಧ ರೀತಿಯ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಬ್ಯಾಂಕುಗಳು SARFAESI ಕಾಯ್ದೆಯ ವಿಧಿಗಳನ್ನು ಬಳಸಿಕೊಂಡು ಕೃಷಿಕರ ಆಸ್ತಿಯನ್ನು ಹರಾಜು ಮಾಡಬಹುದಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ ಪರಿಹಾರ ಮಾರ್ಗ ಒದಗಿಸುವ ಅಗತ್ಯವಿದೆ ಎಂದು ಬೆಳೆಗಾರರು ಮನವಿ ಮಾಡಲಾಗಿದೆ.
