ಕಳಸ: ಬೆಂಗಳೂರು ಮೂಲದ ಪ್ರವಾಸಿಗರು ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಸಮೀಪದ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ.
ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದ ಆರು ಜನರ ಪ್ರವಾಸಿಗರ ತಂಡ ಖಾಸಗಿ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಮುಂದಾಗಿದ್ದರು. ತಿಂಡಿ ತಿನ್ನುವಾಗ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಉದ್ದಿನ ವಡೆ ಹಿಟ್ಟಿನಲ್ಲಿ ಮಿಕ್ಸ್ ಆಗಿದ್ದ ಹಲ್ಲಿ ಎಣ್ಣೆಯಲ್ಲಿ ಚೆನ್ನಾಗಿ ರೋಸ್ಟ್ ಆಗಿತ್ತು. ಪ್ರವಾಸಿಗ ಅಭಿಷೇಕ್ ಹೋಟೆಲ್ ಮಾಲೀಕರಿಗೆ ಹಲ್ಲಿಯನ್ನು ತೋರಿಸಿದಾಗ ಮಾಲೀಕರು ಜಗಳಕ್ಕೆ ಬಂದು ಹಣ ಕೊಡಬೇಡಿ ಹೋಗಿ ಎಂದಿದ್ದಾರೆ.
ಆದರೆ, ಅಭಿಷೇಕ್ ಮಕ್ಕಳು ವಡೆಯನ್ನ ತಿಂದಿದ್ದಾರೆ. ಏನಾದರೂ ಹೆಚ್ಚು-ಕಡಿಮೆ ಆದರೆ ಎಂದು ಆಸ್ಪತ್ರೆಗೆ ತೋರಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಹೊಟೇಲ್ ಮಾಲೀಕ ಆಸ್ಪತ್ರೆಗೆ ತೋರಿಸಲು ನಿರಾಕರಿಸಿದ್ದಾರೆ. ಕೂಡಲೇ ಪ್ರವಾಸಿಗ ಅಭಿಷೇಕ್ 112ಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮೊದಲು ಆಸ್ಪತ್ರೆಗೆ ತೋರಿಸಿ ಆಮೇಲೆ ಮಾತನಾಡೋಣ ಎಂದು ಮಕ್ಕಳು ಸೇರಿದಂತೆ ಆರು ಜನ ಪ್ರವಾಸಿಗರನ್ನು ಕಳಸ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರೀಕ್ಷೆ ನಡೆಸಿದ್ದಾರೆ. ಅದೃಷ್ಟವಶಾತ್, ಯಾರಿಗೂ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ. ಬಳಿಕ ಬೆಂಗಳೂರು ಮೂಲದ ಪ್ರವಾಸಿಗರು ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
