ಮೂಡಿಗೆರೆ: ದೇಶದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವುದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಶನಿವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರಬಲವಾಗಿ ನಡೆಸಿದ ಹೋರಾಟದ ಪರಿಣಾಮ ಕೇಂದ್ರ ಸರಕಾರವೇ ಅಲ್ಲಾಡುವಂತಾಯಿತು. ಅಲ್ಲದೇ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ಕೊಡುವ ಜತೆಗೆ ನ್ಯಾಯ ಪಡೆಯುವಲ್ಲಿ ಯಶಸ್ವಿ ಸಿಕ್ಕಿರುವುದು ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಸಿಕ್ಕಿದಂತಾಗಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರಿಂದ ಇಂದು ತಾನು ಶಾಸಕಿಯಾಗಲು ಸಾಧ್ಯವಾಗಿದೆ. ತಾನು ಕಾರ್ಪೊರೇಟ್ ರೀತಿಯಲ್ಲಿ ಶಾಸಕರ ಕಚೇರಿ ತೆರೆದು ಕೆಲಸ ಮಾಡುತ್ತಿದ್ದೇನೆಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಹೌದು. ನಾನು ಕಾರ್ಪೋರೇಟ್ ರೀತಿಯಲ್ಲಿಯೇ ವಿಭಿನ್ನವಾಗಿ ರಾಜಕಾರಣ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇನೆ. 3 ವರ್ಷದಲ್ಲಿ 152.5ಕೋಟಿ ವೆಚ್ಚದಲ್ಲಿ ಕ್ಷೇತ್ರ ವ್ಯಾಪ್ತಿಯ 491 ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. 67 ಕೋಟಿ ವೆಚ್ಚದಲ್ಲಿ 24 ಸೇತುವೆ ನಿರ್ಮಾಣ, 1.91ಕೋಟಿ ರೂ ವೆಚ್ಚದಲ್ಲಿ 80 ಶಾಲೆಗಳ ಶೌಚಾಲಯ ನಿರ್ಮಾಣ ಮಾಡಲಾಗಿದೆ. ತಾನು ಜನರ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಆಧ್ಯತೆ ನೀಡುತ್ತಿದ್ದು, ಈ ಎಲ್ಲವನ್ನೂ ಕಾರ್ಪೋರೇಟ್ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ಟೀಕೆ ಮಾಡುವವರಿಗೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಹಮ್ಮದ್ ಅಯ್ಮಾನ್ ಹಸನ್, ಎನ್.ಕುಷಿ, ಬಿ.ಎಸ್.ಹೇಮ ಸಿಂದೂರ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಎಸ್.ಅಶ್ವಿನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ರವಿ ಕುನ್ನಳ್ಳಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ತಾಲೂಕು ಸದಸ್ಯರಾದ ಅಶ್ವಥ್ ಮಾಕೋನಹಳ್ಳಿ, ಸುರೇಂದ್ರ ಉಗ್ಗೇಹಳ್ಳಿ, ತಾ.ಪಂ. ಇಒ ದಯಾವತಿ, ಬಿಇಒ ಮೀನಾಕ್ಷಿ, ಎಸಿಎಫ್ ಆಕರ್ಷ್, ಸಿಪಿಐ ರಾಜಶೇಖರ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಅಧ್ಯಕ್ಷರು ಉಪಸ್ಥಿತರಿದ್ದರು.
