ಮೂಡಿಗೆರೆ: ಯೂರೋಪಿಯನ್ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗಬೇಕೆಂದರೆ ಎಲ್ಲಾ ಬೆಳೆಗಾರರು ಇಯುಡಿಆರ್ ನೊಂದಣಿ ಮಾಡಿಸಬೇಕೆಂದು ಕಾಫಿ ಮಂಡಳಿ ಉಪ ನಿರ್ದೇಶಕ ಡಾ.ಕೆ.ತಂಗರಾಜ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಬೆಳೆಗಾರರ ಸಂಘ ಹಾಗೂ ಕಾಫಿ ಮಂಡಳಿ ವತಿಯಿಂದ ಏರ್ಪಡಿಸಿದ್ದ ಕಾಫಿ ವಿಚಾರ ಸಂಕಿರಣ ಹಾಗೂ ಇಯುಡಿಆರ್ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ಚದಲ್ಲಿ ಕಾಫಿ ಉತ್ಪಾಧನೆಯಲ್ಲಿ 7ನೇ ಸ್ಥಾನದಲ್ಲಿರುವ ಭಾರತ ದೇಶದಿಂದ 27 ರಾಷ್ಟ್ರಗಳಿಗೆ ಕಾಫಿ ರಪ್ತಾಗುತ್ತಿದೆ. ಯೂರೋಪಿಯನ್ ಒಕ್ಕೂಟದ ರಾಷ್ಟ್ರಗಳು ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗಾಗಿ ಮುಂದಾಗಿದ್ದು, ನಾವು ಕಾಡು ನಾಶಮಾಡಿ ಕಾಫಿ ಬೆಳೆಯುತ್ತಿಲ್ಲವೆಂಬುದನ್ನು ಇಯುಡಿಆರ್ ನೊಂದಣಿ ಮೂಲಕ ಮಾಹಿತಿ ನೀಡಬೇಕಾಗಿದೆ. ಈ ಪ್ರಕ್ರಿಯೆಯಿಂದ ಮುಂದಿನ ದಿನದಲ್ಲಿ ಭಾರತದ ಕಾಫಿಗೆ ಉತ್ತಮ ಬೇಡಿಕೆ ಬರುವ ಜತೆಗೆ ಸರಾಗವಾಗಿ ಕಾಫಿ ಮಾರಾಟ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾಫಿ ಮಂಡಳಿಯು ಇಂಡಿಯಾ ಕಾಫಿ ಆ್ಯಪ್ ಅಭಿವೃದ್ಧಿಪಡಿಸಿದ್ದು, ಕಾಫಿ ಬೆಳೆಗಾರರಿಗೆ ಮಂಡಳಿಯ ಮಾಹಿತಿ, ಸೇವೆಗಳು ಮತ್ತು ಉತ್ಪನ್ನಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ತಲುಪಿಸುವ ಉದ್ದೇಶ ಹೊಂದಿದೆ. ಅನಗತ್ಯ ಗೊಬ್ಬರ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಮಣ್ಣಿನ ಮತ್ತು ಎಲೆಗಳ ಪರೀಕ್ಷೆ ಆಧಾರದ ಮೇಲೆ ಪೋಷಕಾಂಶ ಬಳಸುವ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ಕಾಫಿ ಮಂಡಳಿಯು ಕಾಫಿ ಬೆಳೆಗಾರರ ಉತ್ಪಾದಕತೆ ಹೆಚ್ಚಿಸಲು ಹೊಸ ತಂತ್ರಜ್ಞಾನ ಮತ್ತು ಡಿಜಿಟಲ್ ಕೃಷಿ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ ಮಾತನಾಡಿ, ಕಾಫಿ ಮಂಡಳಿಯಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ ಅಧ್ಯಕ್ಷರುಗಳು ಕಾಫಿ ಬೆಳೆಗಾರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಹಾಗಾಗಿ ಸರಕಾರ ಹಾಗೂ ವಿಜ್ಞಾನಿಗಳ ಮಾರ್ಗದರ್ಶನದಂತೆ ಎಲ್ಲಾ ಬೆಳೆಗಾರರು ಇಯುಡಿಆರ್ ನೊಂದಣಿ ಮಾಡಿಸಬೇಕೆಂದು ಮನವಿ ಮಾಡಿದ ಅವರು, ಯಾವುದೇ ಸರಕಾರ ಆಡಳಿತಕ್ಕೆ ಬಂದರೂ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ತಾರಾ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್ ಕತ್ಲೆಖಾನ್ ಸೇರಿದಂತೆ ತಾಲೂಕಿನ ವಿವಿಧ ಬೆಳೆಗಾರರ ಹಾಗೂ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.
