Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಖಾಸಗಿಯವರು ಕಾಳಿಂಗ ಹಿಡಿಯುವಂತಿಲ್ಲವೆಂದಿದ್ದು ಸ್ವಾಗತಾರ್ಹ ನಿರ್ಧಾರ: ನಾಗರಾಜ ಕೂವೆ

ಚಿಕ್ಕಮಗಳೂರು: ಖಾಸಗಿಯವರು ಕಾಳಿಂಗ ಹಿಡಿಯುವಂತಿಲ್ಲವೆಂದಿದ್ದು ಸ್ವಾಗತಾರ್ಹ ನಿರ್ಧಾರ: ನಾಗರಾಜ ಕೂವೆ

ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಚಿಕ್ಕಮಗಳೂರಿನ ಅಧಿಕಾರಿಗಳ ಸಭೆಯಲ್ಲಿ “ಕಾಳಿಂಗ ಸರ್ಪಗಳು ತೋಟ, ಮನೆಯ ಬಳಿ ಬಂದ ಬಗ್ಗೆ ದೂರು ಬಂದರೆ ಅರಣ್ಯ ಇಲಾಖೆ ಸಿಬ್ಬಂದಿಯೇ ಅದನ್ನು ಹಿಡಿಯಬೇಕು. ಮಲೆನಾಡು ಜಿಲ್ಲೆಗಳಲ್ಲಿ ( ಕೊಡಗಿನಿಂದ ಉತ್ತರ ಕನ್ನಡದವರೆಗೆ) ಪ್ರತೀ ಅರಣ್ಯ ವಲಯದಲ್ಲಿ , RFO ಕನಿಷ್ಠ ಐದು ಸಿಬ್ಬಂದಿಗೆ ಕಾಳಿಂಗ ಸರ್ಪ ರಕ್ಷಣೆಯ ತರಬೇತಿ ಕೊಡಿಸಬೇಕು. ಕಾಳಿಂಗ ಸರ್ಪಗಳ ರಕ್ಷಣೆಗೆ ಖಾಸಗಿ ಸಂಸ್ಥೆಗಳ ನೆರವು ಪಡೆಯಬಾರದು” ಎಂದು ಆದೇಶಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಹಾಗೂ ಅರಣ್ಯ ಮಂತ್ರಿಗಳ ಐತಿಹಾಸಿಕ ನಿರ್ಧಾರ. ಈ ಕೂಡಲೇ ಮಲೆನಾಡಿನ ಎಲ್ಲಾ ಅರಣ್ಯ ವಲಯಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂದು ಪರಿಸರ ಕಾರ್ಯಕರ್ತರಾದ ನಾಗರಾಜ ಕೂವೆ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಆಗುಂಬೆ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ 20 ವರ್ಷಗಳಿಂದ ಕಾಳಿಂಗ ಸಂಶೋಧನೆ ಮುಖವಾಡದಲ್ಲಿ ನಡೆಯುತ್ತಿರುವ ಕಾಳಿಂಗ ಸರ್ಪ ಶೋಷಣೆ ಸಂಪೂರ್ಣವಾಗಿ ನಿಲ್ಲಬೇಕು. ಇಲ್ಲಿನ ‘ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ(Agumbe Rainforest Research Station) ಮತ್ತು ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್(Kalinga Centrefor Rainforest Ecology)’ ಎಂಬ ಖಾಸಗಿ ಸಂಸ್ಥೆಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ಪರಿಸರ, ವನ್ಯಜೀವಿ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ.

ಈ ಸಂಸ್ಥೆಗಳ ಅಜಯ್ ಗಿರಿ, ಗೌರಿಶಂಕರ್, ಪ್ರದೀಪ್ ಹೆಗಡೆ ಮತ್ತಿತರರ ಮೇಲೆ ಕಾಳಿಂಗ ಸರ್ಪ ಬಂಧನ, ಫೋಟೋಶೂಟ್, ವಿಡಿಯೋ ಚಿತ್ರೀಕರಣ, ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಡುವುದು, ಅನುಮತಿ ಇಲ್ಲದೆ ಸಂಶೋಧನೆ, ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ವಾಣಿಜ್ಯಿಕ ಕಟ್ಟಡಗಳು, ಕಾಡು ಒತ್ತುವರಿ, ಅನುಮತಿ ಇಲ್ಲದೆ ಶಿಬಿರ, ಕಾರ್ಯಾಗಾರ, ಸಂಶೋಧನೆ ಹೆಸರಿನಲ್ಲಿ ಆರ್ಥಿಕ ಚಟುವಟಿಕೆಗಳು, ಪ್ರವಾಸೋದ್ಯಮ ಸೇರಿದಂತೆ ಹತ್ತು ಹಲವು ಕಾನೂನು ಉಲ್ಲಂಘನೆ ಕುರಿತು ಅರಣ್ಯ ಮಂತ್ರಿಗಳಿಗೆ ಈಗಾಗಲೇ ಹಲವು ದೂರುಗಳು ಸಲ್ಲಿಕೆಯಾಗಿವೆ.

ಸದರಿ ವ್ಯಕ್ತಿಗಳು ಭಾರತೀಯ ಅರಣ್ಯ ಕಾಯ್ದೆ – 1927, ಕರ್ನಾಟಕ ಅರಣ್ಯ ಕಾಯ್ದೆ – 1963, ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972, ಅರಣ್ಯ ಸಂರಕ್ಷಣಾ ಕಾಯ್ದೆ -1980, ಪರಿಸರ ಸಂರಕ್ಷಣಾ ಕಾಯ್ದೆ – 1986, ಪರಿಣಾಮಕಾರಿ ಮಾನವ ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ ಕಾರ್ಯಾಚರಣೆ ಕೈಪಿಡಿ – 2022, ಕರ್ನಾಟಕ ಕಂದಾಯ ಕಾಯ್ದೆ – 1964 ನ್ನು ಉಲ್ಲಂಘಿಸಿದ್ದಾರೆ.

ಈ ಎಲ್ಲದರ ಕುರಿತು ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಮೇಲಿನ ಹಿಂಸೆ ಶಾಶ್ವತವಾಗಿ ನಿಲ್ಲಬೇಕು.

ಈ ಸಂಸ್ಥೆಗಳು ಅಧ್ಯಯನದ ಹೆಸರಿನಲ್ಲಿ ವಿದೇಶಿ ದೇಣಿಗೆಗಾಗಿ ‘ಮಲೆನಾಡಿಗರು ಕಾಳಿಂಗ ಕೊಲ್ಲುವವರು’ ಎಂಬಂತೆ ಸಂಶೋಧನಾ ಪ್ರಬಂಧಗಳಲ್ಲಿ ಬಿಂಬಿಸಿದ್ದಾರೆ. ಈ ಸುಳ್ಳು ಆರೋಪದ ಮೂಲಕ ಮಲೆನಾಡಿಗರನ್ನು ಅಪರಾಧಿಗಳಂತೆ ತೋರಿಸಿದ್ದಾರೆ. ಇಲ್ಲಿಯವರೆಗೆ ಮಲೆನಾಡಿಗರು ಒಂದೇ ಒಂದು ಕಾಳಿಂಗ ಸರ್ಪ ಕೊಂದ ಉದಾಹರಣೆ ಇಲ್ಲ. ಹಾಗೆಯೇ ಕಾಳಿಂಗ ಸರ್ಪ ಸಹಜವಾಗಿ ಕಚ್ಚಿ ಜನ ಸತ್ತ ನಿದರ್ಶನ ಕೂಡಾ ಇಲ್ಲ. ಆದರೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ‘ಮಾನವ-ಕಾಳಿಂಗ ಸರ್ಪ ಸಂಘರ್ಷ’ ಎಂಬ ಸುಳ್ಳು ಸಂಕಥನ ಸೃಷ್ಠಿಸಲಾಗಿದೆ. ಸಂರಕ್ಷಣೆ ಹೆಸರಿನಲ್ಲಿ ಕೃತಕವಾಗಿ ಕಾಳಿಂಗದ ಮೊಟ್ಟೆಗಳನ್ನು ಮರಿ ಮಾಡಿ ಕಾಡಿಗೆ ಬಿಟ್ಟು ಪರಿಸರ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ. ಈ ನಿಸರ್ಗ ವಿರೋಧಿ ಕೃತ್ಯದಿಂದಾಗಿ ಹಿಂದೆ ಅಪರೂಪವಾಗಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗಗಳು ಈಗ ಹೆಚ್ಚಾಗಿ ಕಂಡುಬರುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿ ಮಲಬಾರ್ ಪಿಟ್ ವೈಪರ್, ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಮಂಡಲ ಜಾತಿಯ ಹಾವುಗಳನ್ನು ಹಿಡಿದು ತಂದು ತಮ್ಮ ಕೇಂದ್ರಗಳಲ್ಲಿ ಕೃತಕವಾಗಿ ಸಾಕುತ್ತಿರುವುದು ; ಮತ್ತದರ ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ಸೇರಿದಂತೆ ಹಲವಾರು ಅರಣ್ಯೇತರ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ.


ಈ ಕೂಡಲೇ ಸರ್ಕಾರ ಈ ಎಲ್ಲಾ ಅಂಶಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು. ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಸುತ್ತಿರುವ ಅನಧಿಕೃತ ಕಾಳಿಂಗ ಪ್ರವಾಸೋದ್ಯಮದ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಿಸಬೇಕು. ಜೊತೆಗೆ ಆಗುಂಬೆ ಪರಿಸರದಲ್ಲಿ ಕಾಳಿಂಗ ಸರ್ಪಗಳ ನೈಸರ್ಗಿಕ ಜೀವನಕ್ಕೆ ಕಂಟಕವಾದ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಬೇಕು. ಇದು ಈಶ್ವರ್ ಖಂಡ್ರೆಯವರಲ್ಲಿ ನಮ್ಮ ಆಗ್ರಹ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!