ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡುವರೆ ವರ್ಷ ತುಂಬುತ್ತಿದ್ದಂತೆ ನಾಯಕತ್ವ ಬದಲಾವಣೆ ಚರ್ಚೆ, ಗಲಾಟೆ ಮುನ್ನಲೆಗೆ ಬಂದಿದೆ. ಸ್ವಲ್ಪ ಸೈಲೆಂಟಾಗಿದ್ದ ಡಿಕೆಶಿ ಬಣ ಮತ್ತೆ ಸಕ್ರಿಯವಾಗಿದೆ. ಈ ನಡುವೆ ದಿಢೀರ್ ಆಗಿ ದೆಹಲಿಗೆ ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕರು ಯಾತ್ರೆ ಕೈಗೊಂಡಿದ್ದರು.
ಆದರೆ ಸಿಎಂ ಪಟ್ಟಕ್ಕಾಗಿ ಹಠಕ್ಕೆ ಬಿದ್ದ ಡಿಕೆ ಶಿವಕುಮಾರ್, ಇದೀಗ ಏಕಾಏಕಿ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಡಿಕೆ ಶಿವಕುಮಾರ್ ಬಣದ ಶಾಸಕರು ಸಹ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಹೌದು .. ನಿನ್ನೆ ತಡರಾತ್ರಿ 6 ಶಾಸಕರ 2ನೇ ಟೀಂ ದೆಹಲಿಗೆ ತೆರಳಿತ್ತು. ಮಾಗಡಿ ಶಾಸಕ H.C ಬಾಲಕೃಷ್ಣ, ಕದಲೂರು ಉದಯ್, ಶಿವಗಂಗಾ ಬಸವರಾಜ್, ಇಕ್ಬಾಲ್ ಹುಸೇನ್, ಶಾಸಕಿ ನಯನ ಮೋಟಮ್ಮ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಇರುವ 2ನೇ ಟೀಂ ದೆಹಲಿಯ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿತ್ತು. ಆದ್ರೆ, ಹೈಕಮಾಂಡ್ ನಾಯಕರು ಸಿಗದಿದ್ದರಿಂದ ಡಿಕೆ ಬಣ ನಿರಾಸೆಯಿಂದ ಬೆಂಗಳೂರಿಗೆ ವಾಪಸ್ ಆಗಿದೆ.
