ತರೀಕೆರೆ: ಮನೆಗೆ ನುಗ್ಗಿ 9.63 ಲಕ್ಷ ರೂ. ಮೌಲ್ಯದ 96 ಗ್ರಾಂ ಆಭರಣ ಮತ್ತು 8 ಸಾವಿರ ರೂ.ನಗದನ್ನು ಕಳವುಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯರೇಹಳ್ಳಿತಾಂಡ್ಯದ ಆಶಾ ಅವರ ಮನೆಯ ಮೇಲ್ಚಾಣಿಯ ಶೀಟ್ ತೆಗೆದು ನವೆಂಬರ್ 19ರಂದು ಒಳನುಗ್ಗಿರುವ ಕಳ್ಳರು 96 ಗ್ರಾಂ ಚಿನ್ನಾಭರಣ ಮತ್ತು 8 ಸಾವಿರ ನಗದನ್ನು ಕಳವುಮಾಡಿಕೊಂಡು ಹೋಗಿದ್ದರು.
ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ತರೀಕೆರೆ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು.
ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ.ಜಯಕುಮಾರ್, ತರೀಕೆರೆ ವಿಭಾಗದ ಡಿವೈಎಸ್ಪಿ ಪರಶುರಾಮಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷ ರಾಮಚಂದ್ರನಾಯಕ್, ಠಾಣಾಧಿಕಾರಿಗಳಾದ ಮಂಜುನಾಥ ಮನ್ನಂಗಿ,ದೇವೇಂದ್ರರಾಥೋಡ್, ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯಸ್ವಾಮಿ, ಶ್ರೀನಿವಾಸ ಮತ್ತು ಜಿಲ್ಲಾಕಚೇರಿ ತಾಂತ್ರಿಕ ಸಿಬ್ಬಂದಿ ರಬ್ಬಾನಿ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಯರೇಹಳ್ಳಿಯಲ್ಲಿ ಕೃಷಿ ಕೆಲಸಮಾಡುತ್ತಿದ್ದ ರಾಮಕೃಷ್ಣ ಮತ್ತು ಮೇಘರಾಜ್ ಅವರನ್ನು ಬಂಧಿಸಿ 9.63 ಲಕ್ಷದ ಆಭರಣ ಮತ್ತು 4400 ರೂ. ನಗದನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಪಡಿಸಿದ್ದಾರೆ.
