ಚಿಕ್ಕಮಗಳೂರು : ಸಾಲಗಾರ ಸಾವಿಗೀಡಾದ ಪ್ರಕರಣದಲ್ಲಿ ಸಾಲದ ಮೇಲೆ ಪಡೆದಿದ್ದ ವಿಮಾ ಪಾಲಿಸಿಯ ಹಣವನ್ನು ನೀಡದ ಇನ್ಶೂರೆನ್ಸ್ ಕಂಪನಿ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸಾಲದ ಮೊತ್ತ 25.60 ಲಕ್ಷ ರೂ. ನೀಡುವಂತೆ ಆದೇಶ ನೀಡಿದೆ.

ಅಜ್ಜಂಪುರ ಗ್ರಾಮದ ಬಿ.ಕಲ್ಲೇಶಪ್ಪ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ನ ಚಿಕ್ಕಮಗಳೂರು ಶಾಖೆಯಿಂದ ಸಾಲ ಪಡೆದಿದ್ದು, ಈ ಸಂಬಂಧ ಹೆಚ್.ಡಿ.ಎಫ್.ಸಿ. ಲೈಫ್ ಇನ್ಶೂರೆನ್ಸ್ ಕಂಪನಿಯಿಂದ 25 ಲಕ್ಷ ರೂ.ಗಳ ಜೀವವಿಮೆ ಪಡೆದುಕೊಂಡಿದ್ದರು. ಅಪಘಾತದಿಂದ ಕಲ್ಲೇಶಪ್ಪ 2023ರ ಜುಲೈ 26 ರಂದು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಸಾಧ್ಯವಾಗದಿದ್ದಾಗ ಮೃತ ಕಲ್ಲೇಶಪ್ಪ ಅವರ ಪತ್ನಿ ಬಿ.ಎಂ.ಸುನೀತ, ಪುತ್ರಿಯರಾದ ಬಿ.ಕೆ.ಕೀರ್ತನಾ, ಬಿ.ಕೆ.ಅಮೂಲ್ಯ ವಿಮಾ ಹಣ ಕೋರಿದ್ದು ಇದಕ್ಕೆ ಮನ್ನಣೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುನೀತಾ ಹಾಗೂ ಅವರ ಇಬ್ಬರು ಪುತ್ರಿಯರು ವಿಮಾ ಕಂಪನಿಯ ವ್ಯವಸ್ಥಾಪಕರ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ 2024ರ ಆಗಸ್ಟ್ 19 ರಂದು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗವು ಅಕ್ಟೋಬರ್ 31 ರಂದು ತೀರ್ಪು ನೀಡಿದ್ದು, ಇನ್ಶೂರೆನ್ಸ್ ಕಂಪನಿಯು ದೂರುದಾರರಿಗೆ ವಿಮಾ ಪರಿಹಾರವಾಗಿ 25 ಲಕ್ಷ ರೂ.ಗಳನ್ನು 2023ರ ಸೆಪ್ಟಂಬರ್ 29 ರಿಂದ ವಾರ್ಷಿಕ ಶೇ. 9ರ ಬಡ್ಡಿ ದರದಲ್ಲಿ ನೀಡುವಂತೆ ಹಾಗೂ ಪರಿಹಾರವಾಗಿ 60 ಸಾವಿರ ರೂ, ಮತ್ತು ಪ್ರಕರಣದ ಖರ್ಚು-ವೆಚ್ಚಕ್ಕಾಗಿ 10 ಸಾವಿರ ರೂ. ನೀಡುವಂತೆ ಆದೇಶ ನೀಡಿದೆ.
