ಕೊಟ್ಟಿಗೆಹಾರ: ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರ ಪಟ್ಟಣದಲ್ಲಿ ಹುಚ್ಚು ನಾಯಿಗಳ ಕಾಟ ತೀವ್ರಗೊಂಡಿದ್ದು, ಕಳೆದ ಕೆಲ ದಿನಗಳಲ್ಲಿ ನಾಲ್ಕೈದು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆಗಳು ವರದಿಯಾಗಿವೆ. ಪಟ್ಟಣದ ವಿವಿಧ ಭಾಗಗಳಲ್ಲಿ ಅಟ್ಟಹಾಸ ಮೆರೆದ ಹುಚ್ಚು ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿವೆ.
ಹುಚ್ಚು ನಾಯಿಗಳು ಮಾನವರಷ್ಟೇ ಅಲ್ಲದೆ ಕೆಲವು ಬೀದಿ ನಾಯಿಗಳಿಗೂ ಕಚ್ಚಿರುವುದು ತಿಳಿದುಬಂದಿದೆ. ದಾಳಿಯಿಂದ ಗಾಯಗೊಂಡವರು ಸ್ಥಳೀಯ ಬಣಕಲ್ ಸಾಯಿ ಕೃಷ್ಣ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರ ಪ್ರಕಾರ ಗಾಯಗೊಂಡವರ ಆರೋಗ್ಯ ಸ್ಥಿತಿ ಸದ್ಯ ನಿಯಂತ್ರಣದಲ್ಲಿ ಇದೆ ಎಂದು ತಿಳಿದುಬಂದಿದೆ.ನಿರಂತರ ದಾಳಿಗಳಿಂದ ಆತಂಕಕ್ಕೊಳಗಾದ ಸ್ಥಳೀಯರು ಕೊನೆಗೆ ಹುಚ್ಚು ನಾಯಿಯನ್ನು ಅಟ್ಟಾಡಿಸಿ ಹಿಡಿದು ಹೊಡೆದು ಸಾಯಿಸಿರುವ ಘಟನೆ ಕೂಡ ನಡೆದಿದೆ.
ಈ ಘಟನೆಯ ನಂತರ ಪಟ್ಟಣದ ಜನತೆ ಸ್ವಲ್ಪ ಮಟ್ಟಿಗೆ ನಿರಾಳಗೊಂಡರೂ, ಇಂತಹ ಘಟನೆಗಳು ಮರುಕಳಿಸುವ ಭೀತಿಯು ಇನ್ನೂ ಮುಂದುವರಿದಿದೆ.ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಈ ರೀತಿಯ ಅಪಾಯಗಳು ಎದುರಾಗುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣ ಎಚ್ಚೆತ್ತುಕೊಂಡು, ಬೀದಿ ನಾಯಿಗಳ ನಿಯಂತ್ರಣ, ಲಸಿಕೆ ನೀಡುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
