ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿಂದು ಎಳ್ಳಮವಾಸ್ಯೆಯನ್ನು ಸಂಪ್ರದಾಯಬದ್ದವಾಗಿ ಆಚರಿಸಲಾಯಿತು. ಎಳ್ಳಮವಾಸ್ಯೆಯಂದು ಪಿತೃಗಳಿಗೆ ಪಿಂಡ ಬಿಡುವುದು ಸಂಪ್ರದಾಯ. ಜೊತೆಗೆ ಎಳ್ಳಮವಾಸ್ಯೆಯಂದು ಸಮುದ್ರ ಸ್ನಾನ ಮಾಡಿದ್ರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರದ್ದು.
ಕರಾವಳಿಯಲ್ಲಿ ಎಳ್ಳಮವಾಸ್ಯೆ ಎಂದರೆ ಶುಭದಿನ. ಈ ದಿನದಂದು ಸಮುದ್ರ ಸ್ನಾನ ಮಾಡುವುದು ಸಂಪ್ರದಾಯ. ಬೆಳಗ್ಗೆಯಿಂದಲೇ ಲಕ್ಷಾಂತರ ಮಂದಿ ಸಮುದ್ರ ಮಲ್ಪೆಯಲ್ಲಿ ಸಮುದ್ರ ಸ್ನಾನ ಮಾಡಿದರು. ಪಿತೃಗಳಿಗೆ ಎಳ್ಳಮವಾಸ್ಯೆಯಂದು ಪಿಂಡಪ್ರದಾನ ಮಾಡಿದ್ರೆ ಅವರ ಆತ್ಮ ಸದ್ಗತಿಯನ್ನು ಪಡೆಯುತ್ತದೆ- ಆತ್ಮಕ್ಕೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಎಳ್ಳಮವಾಸ್ಯೆಯಂದು ಸಮುದ್ರದ ನೀರಿನಲ್ಲಿ ಉಪ್ಪಿನಂಶ ಹೇರಳವಾಗಿರುತ್ತದೆ. ಈ ದಿವಸ ಸಮುದ್ರ ಸ್ನಾನ ಮಾಡಿದರೆ ಚರ್ಮ ಮುಂತಾದ ದೇಹದ ಮೇಲ್ಭಾಗದ ರೋಗಗಳು ನಾಶವಾಗುತ್ತದೆ ಎಂಬುದು ಈಗಾಗಲೇ ದೃಢಪಟ್ಟಿದೆ.
ಅದರಲ್ಲೂ ಎಳ್ಳಮವಾಸ್ಯೆಯಂದು ಸಮುದ್ರದ ನೀರಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬ ನಂಬಿಕೆಯಿದೆ. ಇದೇ ಉದ್ದೇಶದಿಂದ ಮಲ್ಪೆ ಕಡಲಿನಲ್ಲಿ ಸಾವಿರಾರು ಮಂದಿ ಪವಿತ್ರಸ್ನಾನ ಮಾಡಿದರು.
ಉಡುಪಿ ನಗರ ಮಾತ್ರವಲ್ಲದೆ , ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಜನರು ಬಂದಿದ್ದರು. ಜನರ ಅನುಕೂಲ ಕಂತಲೆ ನೂರಾರು ವೈದಿಕರು ಹಾಜರಿದ್ದು ಪಿಂಡಪ್ರದಾನದ ಸಂಪ್ರದಾಯಗಳನ್ನು ನಡೆಸಿಕೊಟ್ಟರು. ಪಿಂಡಪ್ರದಾನ ಮಾಡಿದ ಬಳಿಕ ಸಮುದ್ರದಲ್ಲಿ ಅರ್ಗ್ಯ ಬಿಟ್ಟು ಸ್ನಾನ ಮಾಡಿ, ಅಲ್ಲೇ ಪಕ್ಕದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನಕ್ಕೆ ಹೋಗುವುದು ಸಂಪ್ರದಾಯ.
ಬಲರಾಮ ದೇವರ ದರ್ಶನ ಕೈಗೊಂಡ ಬಳಿಕ ಸಾಕ್ಷಿಗಳನ್ನು ಮುಟ್ಟಿ ಎಳ್ಳಮವಾಸ್ಯೆಯ ಆಚರಣೆಯನ್ನು ತುಳುವರು ಮಾಡುತ್ತಾ ಬಂದಿದ್ದಾರೆ. ಕೇವಲ ಮಲ್ಪೆ ಕಡಲ ತೀರ ಮಾತ್ರವಲ್ಲ ಉಡುಪಿ ಜಿಲ್ಲೆಯ ಬಹುತೇಕ ಕಡಲ ತೀರ ಪ್ರದೇಶಗಳಲ್ಲಿ ಇಂದು ಲಕ್ಷಾಂತರ ಜನ ಸಮುದ್ರ ಸ್ನಾನ ಕೈಗೊಂಡಿದ್ದರು.
