ಚಿಕ್ಕಮಗಳೂರು: ಬುದ್ಧಿಮಾಂದ್ಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 31 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 55,000 ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಶಾಂತಕುಮಾರ ಅಲಿಯಾಸ್ ಶಾಂತು ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.
ಘಟನೆಯ ಹಿನ್ನೆಲೆ:
ಕಳೆದ ಫೆಬ್ರವರಿ 7ರಂದು ಈ ಘಟನೆ ನಡೆದಿತ್ತು. ಅಪರಾಧಿ ಶಾಂತಕುಮಾರನು 15 ವರ್ಷದ ಬುದ್ಧಿಮಾಂದ್ಯ ಬಾಲಕಿಯನ್ನು ಜಾನುವಾರು ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಬಾಲಕಿಯು ಮನೆಯ ಬಳಿ ಕಾಣಿಸದಿದ್ದಾಗ ಆತಂಕಗೊಂಡ ತಂದೆ ಹುಡುಕಾಟ ನಡೆಸಿದ್ದರು. ಈ ವೇಳೆ ಬಾಲಕಿಯು ಶಾಂತಕುಮಾರನ ಮನೆಯ ಕಡೆಯಿಂದ ಅಳುತ್ತಾ ಬರುತ್ತಿರುವುದು ಕಂಡುಬಂದಿತ್ತು. ಬಾಲಕಿಯನ್ನು ವಿಚಾರಿಸಿದಾಗ ಆಕೆ ನಡೆದ ಘೋರ ಘಟನೆಯನ್ನು ವಿವರಿಸಿದ್ದಳು.
ಬಾಲಕಿಯ ತಂದೆ ತಕ್ಷಣವೇ ಆಕೆಯನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತು. ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಾಂತಕುಮಾರನಿಗೆ 31 ವರ್ಷಗಳ ದೀರ್ಘಾವಧಿ ಶಿಕ್ಷೆ ಪ್ರಕಟಿಸಿದೆ. ದಂಡದ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಸಂತ್ರಸ್ತೆಯ ಪರಿಹಾರಕ್ಕೆ ಬಳಸಲು ಸೂಚಿಸಲಾಗಿದೆ.
