ಬೆಂಗಳೂರು: ಬಳ್ಳಾರಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣವನ್ನು ಸಿಬಿಐ ಇಲ್ಲವೇ, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ಶಾಸಕ,ವಿಪ ಜೆಡಿಎಸ್ ಉಪನಾಯಕ, ಟಿ.ಎ. ಶರವಣ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಪೊಲೀಸ್ ಇಲಾಖೆಯಿಂದ ನಡೆಯುವ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದಿದ್ದಾರೆ.
ಬಳ್ಳಾರಿ ಹಿಂಸಾಚಾರ ಪ್ರಕರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರ ಅಟ್ಟಹಾಸ ಬಹಿರಂಗವಾಗಿದೆ. ಈ ಮೂಲಕ ಕಾಂಗ್ರೆಸ್ ಹೊಸ ಶೈಲಿಯ ರಕ್ತ ರಾಜಕಾರಣಕ್ಕೆ ಮುಂದಾಗಿದೆ ಎಂದು ಶರವಣ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರೌಡಿಗಳ ಪಡೆಯಿಂದ ಬಳ್ಳಾರಿಯಲ್ಲಿ ಹೊಸ ರೀತಿಯ ರಕ್ತ ಚರಿತ್ರೆಯನ್ನು ಬರೆಯಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರ ಖಾಸಗಿ ಅಂಗರಕ್ಷಕ ಪಡೆ ಬಿಜೆಪಿ ನಾಯಕ ಜನಾರ್ಧನರೆಡ್ಡಿ ಅವರ ನಿವಾಸವನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ಗುಂಡಿನ ದಾಳಿ ಗಮನಿಸಿದರೆ ಪ್ರತಿಪಕ್ಷ ಗಳ ವಿರುದ್ಧ ದೊಡ್ಡ ಪಿತೂರಿ ನಡೆದಿರುವುದು ಗೊತ್ತಾಗುತ್ತದೆ ಎಂದವರು ವಿಶ್ಲೇಷಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು ಇದೊಂದು ಜಂಗಲ್ ರಾಜ್ ಆಗಿದೆ. ಗೂಂಡಾ ರಾಜ್ ಆಗಿದೆ. ಇಲ್ಲಿ ಹೇಳುವವರೂ ಕೇಳುವವರೂ ಇಲ್ಲವಾಗಿದ್ದಾರೆ. ಅರಾಜಕತೆಯಿಂದ ಸರ್ಕಾರ ಅಸ್ಥಿರಗೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
