ಕಾಫಿನಾಡಲ್ಲಿ ವರ್ಷದ ಮೊದಲ ಮಳೆಯೇ ರೈತರ ಕಣ್ಣಲ್ಲಿ ನೀರು ತರಿಸಿದೆ. ಮನೆಗಳ ಮುಂದೆ ಒಣಗಿಸಿದ್ದ ಕಾಫಿ ಬೀಜ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.
ಹೌದು .. ಮೂಡಿಗೆರೆ ತಾಲೂಕಿನ ಮಾಳಿಗನಾಡು ಸುತ್ತಮುತ್ತ ಅಕಾಲಿಕ ಮಳೆಯಿಂದ ಕಣದಲ್ಲಿ ಒಣಗಿ ಹಾಕಿದ್ದ ಕಾಫಿ ಕೊಚ್ಚಿ ಹೋದ ಪರಿಣಾಮ ರಕ್ಷಿಸಿಕೊಳ್ಳಲು ಜನರು ಹರಸಾಹಸ ಪಡುವಂತಾಯ್ತು.
ಸುರಿದ ಮಳೆ ಕಾಫಿ ಬೆಳೆಗಾರರಿಗೆ ಆತಂಕ ತರಿಸಿದೆ. ತಾಲ್ಲೂಕಿನಲ್ಲಿ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿರುವ ಈ ದಿನಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಹನಿ ಮಳೆ ಸಹಜವಾಗಿಯೇ ಆತಂಕ ತಂದೊಡ್ಡಿದೆ.
ಭತ್ತದ ಬೆಳೆ ಕೊಯ್ಲು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಫಿ ಕೊಯ್ಲು ಇದೀಗ ಭರದಿಂದ ಸಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಹರವಿ ಒಣಗಿಸಲಾಗುತ್ತಿದೆ. ಮೋಡ ಕವಿದ ವಾತಾವರಣದಿಂದ ಕಾಫಿ ಒಣಗಿಸಲು ತೊಡಕಾಗಿದೆ ಎಂದು ಬೆಳಗಾರರು ಸಮಸ್ಯೆ ತೋಡಿಕೊಂಡರು.
ಈಗ ಮಳೆಯಾದಲ್ಲಿ ಕೊಯ್ದು ಮಾಡಿದ ಕಾಫಿಗೂ ಹಾನಿಯಾಗುವುದಲ್ಲದೇ ಮುಂದಿನ ವರ್ಷದ ಫಸಲಿಗೂ ಧಕ್ಕೆ ಆಗಲಿದೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆಯಾದಲ್ಲಿ ಬೆಳೆಗಾರರಿಗೆ ಅನುಕೂಲ ಎಂದು ರೈತರು ಅಭಿಪ್ರಾಯಪಟ್ಟರು.
ವಿವಿಧೆಡೆ ತುಂತುರು ಮಳೆಯಾಗಿದ್ದರೆ ಕೆಲ ಹೋಬಳಿ ವ್ಯಾಪ್ತಿಯಲ್ಲಿ ಗಂಟೆ ಗಟ್ಟಲೆ ಜೋರಾಗಿ ಮಳೆ ಸುರಿದು ಕಾಫಿ ಕೊಚ್ಚಿ ಹೋಗಿವೆ ಸಣ್ಣ ಬೆಳೆಗಾರರಿಗೆ ಇದು ವರ್ಷದ ಕೂಳು ಎಲ್ಲವು ಕೊಚ್ಚಿ ಹೋಯಿತು. ಮುಂದಿನ ಜೀವನ ಕಷ್ಟ ಸಾಧ್ಯ ಎಂದು ರೈತರು ನೋವು ತೋಡಿಕೊಂಡರು
ವರದಿ :ಪುನೀತ್ ಕಡಿದಾಳು
9483811948
