ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಮಲೆನಾಡು ಭಾಗದ ಕಾಫಿತೋಟಗಳಲ್ಲಿ ಅಪಾರ ನಷ್ಟ ಉಂಟಾಗಿದ್ದು, ಈ ಬಗ್ಗೆ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವಂತೆ ಕೆಪಿಸಿಸಿ ವಕ್ತಾರ, ಬೆಳೆಗಾರ ಎಚ್.ಎಚ್.ದೇವರಾಜ್ ಆಗ್ರಹಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕಾಲಿಕ ಮಳೆಯಿಂದ ಕಳಸ, ಶೃಂಗೇರಿ, ಕೊಪ್ಪ, ಮತ್ತಿತರೆ ಕಡೆ ಕಾಫಿಹಣ್ಣು ಕೊಯ್ಲು ಆಗುವ ಮುನ್ನವೇ ಗಿಡದಲ್ಲಿ ಮೊಗ್ಗಾಗಿದೆ. ಇದು ಅರಳಲು ಮತ್ತೆ ಮಳೆ ಬೇಕು. ಇಲ್ಲದಿದ್ದಲ್ಲಿ ಹಳದಿಯಾಗಿ ಉದುರಿಹೋಗುತ್ತದೆ. ಇದು ಮುಂದಿನ ವರ್ಷದ ಫಸಲಿನ ಮೇಲೆ ನೇರ ಪರಿಣಾಮ ಬೀರಲಿದ್ದು, ಬೆಳೆಗಾರರ ಅಪಾರ ನಷ್ಟ ಹೊಂದಬೇಕಾಗುತ್ತದೆ. ಹೀಗಾಗಿ ಕಾಫಿ ಮಂಡಳಿ ಸಮಗ್ರ ಸಮೀಕ್ಷೆ ನಡೆಸಿ ನೈಜ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ಕೊಡಿಸುವಲ್ಲಿ ಸಂಸದರು, ಕಾಫಿ ಮಂಡಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಕಾಫಿ ಮಂಡಳಿ ಅಧ್ಯಕ್ಷರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳು ಒಂದು ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಸಚಿವರ ಬಳಿ ವೈಜ್ಞಾನಿಕವಾದ ವರದಿ ನೀಡಿ ಮನವರಿಕೆ ಮಾಡಿಕೊಡಬೇಕು. ಇಲದಿದ್ದರೆ ಇಲ್ಲಿನ ಸಂಸದರ ವಿರುದ್ಧ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಪ್ರಕಾಶ್ರೈ, ಶ್ರೀನಿವಾಸ ದೇವಾಂಗ, ರಾಜು ಇದ್ದರು.
