ಹಾಸನ : ಪ್ರಿಯಕರ ಜಾತಿಯ ಕಾರಣಕ್ಕೆ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲ್ಲೂಕಿನ, ಶಾಂತಿಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (19) ಮೃತ ಯುವತಿ. ಈಕೆ ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿ ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತನನ್ನ ಪ್ರೀತಿಸುತ್ತಿದ್ಳು. ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್ನಲ್ಲಿ ಅಮೃತ ಹಾಗೂ ದಿಲೀಪ್ ಇಬ್ಬರೂ ಒಟ್ಟಿಗೆ ಕೆಲಸ ಮಾಡ್ತಿದ್ದು, ಒಂದೂವರೆ ವರ್ಷದಿಂದ ಇವರಿಬ್ಬರೂ ಪ್ರೀತಿಸುತ್ತಿದ್ರು ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಅಮೃತ ಪೋಷಕರಿಗೆ ಪ್ರೀತಿಯ ವಿಷಯ ತಿಳಿದಿದೆ. ಮಾ.11 ರಂದು ದಿಲೀಪ್ ನನ್ನು ಮನೆಗೆ ಬರಲು ಅಮೃತ ಪೋಷಕರು ಹೇಳಿದ್ದಾರೆ. ಆದ್ರೆ ಅಂದು ನುಗ್ಗೇಹಳ್ಳಿಯಲ್ಲಿ ಅಮೃತಾಳನ್ನು ಭೇಟಿ ಮಾಡಿದ್ದ ದಿಲೀಪ್ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ, ನನಗೂ ನಿನಗೂ ಯಾವ ಸಂಬಂಧವಿಲ್ಲ. ನಮ್ಮಿಬ್ಬರ ಜಾತಿ ಬೇರೆ-ಬೇರೆ ಎಂದು ಹೇಳಿ ಅಲ್ಲಿಂದ ವಾಪಾಸ್ಸಾಗಿದ್ದ. ನಂತರ ಅಮೃತ ಕೆಲಸಕ್ಕೆ ಬರಲು ಹಾಸನದ ಬಸ್ ಹತ್ತಿ ಹೊರಟಿದ್ದಾಳೆ. ಆನಂತರ ನಾನು ಕೆಲಸಕ್ಕೆ ಬರುವುದಿಲ್ಲ ಎಂದು ಸ್ನೇಹಿತೆಗೆ ತಿಳಿಸಿ ಶಾಂತಿಗ್ರಾಮದಲ್ಲಿ ಬಸ್ ಇಳಿದಿದ್ದಾಳೆ. ಇತ್ತ ಮಗಳು ಮನೆಗೆ ಬರದೇ ಇದ್ದಾಗ ಅಮೃತ ಪೋಷಕರು ಎಲ್ಲೆಡೆ ಹುಡುಕಾಡಿ ನುಗ್ಗೇಹಳ್ಳಿ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದಾರೆ. ಇಂದು ಶಾಂತಿಗ್ರಾಮ ಕೆರೆಯಲ್ಲಿ ಅಮೃತ ಶವ ತೇಲುತ್ತಿದ್ದದ್ದು ಕಂಡುಬಂದಿದೆ. ಪ್ರಿಯಕರ ಕೈಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.