ಚಿಕ್ಕಮಗಳೂರು: ಉಪವಿಭಾಗಾಧಿಕಾರಿ ಸುದರ್ಶನ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ದಿಢೀರ್ ವರ್ಗಾವಣೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಈ ವರ್ಗಾವಣೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆಯೇ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕಳೆದ 2025ರ ಜೂನ್ 20 ರಂದು ದೇವರಾಜ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದ ಸುದರ್ಶನ್ ಅವರು ಕೇವಲ ಏಳು ತಿಂಗಳಷ್ಟೇ ಪೂರೈಸಿದ್ದು ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ರಾಜ್ಯದ ಆಡಳಿತ ಪಕ್ಷದ ವಿರುದ್ಧ ನಡೆಗಳನ್ನು ಇಟ್ಟಿದ್ದರು ಎಂಬ ಗಂಭೀರ ಆರೋಪಗಳೇ ವರ್ಗಾವಣೆಗೆ ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಜಿಲ್ಲೆಯ ಇಬ್ಬರು ಶಾಸಕರ ಹಸ್ತಕ್ಷೇಪದಿಂದಲೇ ಈ ಎತ್ತಂಗಡಿ ನಡೆದಿದೆ ಎಂಬ ಚರ್ಚೆ ನಡೆಯುತ್ತಿವೆ.
ಜೊತೆಗೆ ಪ್ರತಿಷ್ಠಿತ ಕಂಪನಿಯೊಂದರ ಭೂ ಮಂಜೂರಾತಿಗೆ ಪ್ರಭಾವಿಗಳು ಒತ್ತಡ ಹಾಕಿದ್ದರೂ ಮಣಿಯದೆ ಇದ್ದಿದ್ದು ವರ್ಗಾವಣೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಒಂದು ವರ್ಷದಿಂದ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಕುರ್ಚಿ ಮ್ಯೂಸಿಕಲ್ ಚೇರ್ ಆದಂತಾಗಿರುವುದು ಆಡಳಿತಾತ್ಮಕ ಅಸ್ಥಿರತೆಗೆ ಸಾಕ್ಷಿಯಾಗಿದೆ.
ಕಳೆದ ಜನವರಿಯಿಂದ ಈವರೆಗೆ ರಶ್ಮಿ, ಸುಮಂತ್, ಕಾಂತರಾಜು ಮತ್ತು ದೇವರಾಜ್ ಅವರಂತಹ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ವರ್ಗಾವಣೆಗೊಂಡಿದ್ದು ಈಗ ಸುದರ್ಶನ್ ಅವರ ಸರದಿಯಾಗಿರುವುದು ಅಧಿಕಾರಿಗಳ ಪಾಲಿಗೆ ಈ ಕುರ್ಚಿ ಕಂಟಕವಾಗಿ ಪರಿಣಮಿಸಿದೆ
