ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ತಕ್ಕ ಉತ್ತರ ನೀಡಲಾಗಿದೆ. ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂದು ದೂರುತ್ತಿದ್ದ ರಾಜ್ಯ ಸರ್ಕಾರಕ್ಕೆ ಈಗಿನ ಹಂಚಿಕೆ ಕನ್ನಡಿ ಹಿಡಿದಂತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ದೊರೆತಿರುವ ಅನುದಾನ ಮತ್ತು ಹೊಸ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ತೆರಿಗೆ ಪಾಲಿನಲ್ಲಿ ಗಣನೀಯ ಏರಿಕೆ
16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನೀಡುವ ತೆರಿಗೆ ಪಾಲನ್ನು ಶೇ 3.64 ರಿಂದ ಶೇ 4.13ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಇದರ ಫಲವಾಗಿ 2026-27ನೇ ಸಾಲಿನಲ್ಲಿ ರಾಜ್ಯಕ್ಕೆ ಸುಮಾರು ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಈ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದೆ. ಇನ್ನು ಮುಂದಾದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜಕೀಯ ಪ್ರೇರಿತ ಟೀಕೆಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಕೃಷಿ ಮತ್ತು ರೈಲ್ವೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ
ಕೃಷಿ ಉತ್ತೇಜನ: ತೆಂಗು ಬೆಳೆ ಪ್ರೋತ್ಸಾಹ ಯೋಜನೆ ಮತ್ತು ಗೋಡಂಬಿ ಹಾಗೂ ಕೋಕೋವನ್ನು 2030ರ ವೇಳೆಗೆ ಜಾಗತಿಕ ಬ್ರಾಂಡ್ ಆಗಿ ರೂಪಿಸುವ ಕೇಂದ್ರದ ನಿರ್ಧಾರದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಲಾಭವಾಗಲಿದೆ. ಶ್ರೀಗಂಧ ಬೆಳೆಗಾರರಿಗೂ ವಿಶೇಷ ಯೋಜನೆಗಳು ಅನುಕೂಲವಾಗಲಿವೆ.
ಹೈಸ್ಪೀಡ್ ರೈಲು ಕ್ರಾಂತಿ: ಹೈದರಾಬಾದ್-ಬೆಂಗಳೂರು ಮತ್ತು ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳು ರಾಜ್ಯಕ್ಕೆ ವರದಾನವಾಗಲಿವೆ. ಈಗಾಗಲೇ ವಂದೇ ಭಾರತ್ ರೈಲುಗಳ ಮೂಲಕ ವೇಗ ಪಡೆದಿರುವ ರೈಲು ಸಂಪರ್ಕವು ಈಗ ಹೈಸ್ಪೀಡ್ ರೈಲುಗಳ ಮೂಲಕ ಹೊಸ ಕ್ರಾಂತಿಗೆ ಸಾಕ್ಷಿಯಾಗಲಿದೆ.
ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ
ಈ ಬಜೆಟ್ ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ, ಬದಲಿಗೆ 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣ ಮಾಡುವ ನರೇಂದ್ರ ಮೋದಿಯವರ ಮುನ್ನೋಟದ ಫಲಿತಾಂಶವಾಗಿದೆ. ಪ್ರತಿ ಹಳ್ಳಿ, ಪ್ರತಿ ಪಂಚಾಯಿತಿ ಮತ್ತು ಪ್ರತಿ ಜಿಲ್ಲೆಯನ್ನು ಒಳಗೊಂಡಿರುವ ಈ ಬಜೆಟ್ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿಯಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
