ಚಿಕ್ಕಮಗಳೂರು: ರಾಮನಗರ ನಮ್ಮ ತಂದೆಯ ಕರ್ಮಭೂಮಿ ಮತ್ತು ನಮ್ಮ ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ. ಈ ಮಣ್ಣನ್ನು ಬಿಟ್ಟು ನಾನು ಎಲ್ಲಿಗೂ ವಲಸೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯೊಂದಿಗೆ ತಮ್ಮ ಕುಟುಂಬಕ್ಕಿರುವ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.
ರಾಮನಗರವೇ ನನ್ನ ರಾಜಕೀಯ ನೆಲೆ: 1994ರಲ್ಲಿ ಹಾಸನದಿಂದ ಬಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದು ಇದೇ ರಾಮನಗರದ ಮಣ್ಣು. ಈ ಜಿಲ್ಲೆಯಲ್ಲಿ ನಮ್ಮ ಕುಟುಂಬವನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ. ನನ್ನನ್ನೇ ನಂಬಿರುವ ಸಾವಿರಾರು ಕಾರ್ಯಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವ ಜಾಯಮಾನ ನಮ್ಮದಲ್ಲ. ಮುಂದಿನ ಚುನಾವಣೆಯಲ್ಲಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ಯೋಚನೆ ನನಗಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.
ಅಭಿವೃದ್ಧಿಯೇ ನಮಗೆ ಶ್ರೀರಕ್ಷೆ: ರಾಮನಗರ ಜಿಲ್ಲೆಯ ನೀರಾವರಿ, ರಸ್ತೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕುಟುಂಬ ಅಪಾರ ಶ್ರಮ ಹಾಕಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಜಿಲ್ಲೆಯ ಜನ ನಮ್ಮನ್ನು ಕೈಹಿಡಿದಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವು ಮತ್ತು ಏರುಪೇರುಗಳು ಸಹಜ. ಇತ್ತೀಚಿನ ಸಣ್ಣಪುಟ್ಟ ಹಿನ್ನೆಡೆಗಳನ್ನು ಸಮತೋಲನದಿಂದ ಸ್ವೀಕರಿಸಿ, ಮತ್ತೆ ಜನರ ವಿಶ್ವಾಸ ಗಳಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಾತಿಗಣತಿ ಬಗ್ಗೆ ಆಕ್ಷೇಪ: ರಾಜ್ಯ ಸರ್ಕಾರದ ಜಾತಿಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್, “ಜಾತಿಗಣತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು, ರಾಜಕೀಯ ತಂತ್ರವಾಗಬಾರದು. ಸರ್ಕಾರ ತನ್ನ ಲೋಪದೋಷಗಳನ್ನು ಮುಚ್ಚಿ ಹಾಕಲು ಮತ್ತು ಜನರನ್ನು ದಿಕ್ಕು ತಪ್ಪಿಸಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ವರದಿಯು ಪಾರದರ್ಶಕವಾಗಿರಬೇಕು, ರಾಜಕೀಯ ಪ್ರೇರಿತವಾಗಿರಬಾರದು,” ಎಂದು ಕಿಡಿಕಾರಿದರು.
