ಉಡುಪಿ; ನದಿಯಲ್ಲಿ ಬಿದ್ದಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಮುಳುಗುತಜ್ಞ ಈಶ್ವರ್ ಮಲ್ಪೆ ಪತ್ತೆ ಮಾಡಿಕೊಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ಮಡಿಸಾಲು ಹೊಳೆಯಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ತೂಗು ಸೇತುವೆ ಬಳಿ ನಾಲ್ವರು ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಒಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳೆದುಹೋಯಿತು. ತತ್ಕ್ಷಣ ಆಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ಸರವನ್ನು ಹುಡುಕಿ ಕೊಂಡುವಂತೆ ವಿನಂತಿಸಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿ ಸರ ಹುಡುಕಿ ಮರಳಿಸಿದ್ದಾರೆ.ಈ ಹಿಂದೆ ಕೂಡ ಈಶ್ವರ್ ಮಲ್ಪೆ ನೀರಿಗೆ ಬಿದ್ದಿದ್ದ ಚಿನ್ನಾಭರಣ ಹುಡುಕಿಕೊಟ್ಟಿದ್ದರು.ಈಶ್ವರ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.ಸರ ಮರಳಿ ಪಡೆದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈಶ್ವರ್ ಮಲ್ಪೆ ಅವರು ಒಬ್ಬ ಅನುಭವಿ ಮುಳುಗುತಜ್ಞರಾಗಿದ್ದು, ಈವರೆಗೆ ಹಲವಾರು ಕಡೆಗಳಲ್ಲಿ ನೀರಿಗೆ ಬಿದ್ದಿರುವ ನೂರಾರು ಮೊಬೈಲ್ ಗಳನ್ನು, ವಾಹನಗಳನ್ನು ಹುಡುಕಿಕೊಟ್ಟಿದ್ದಾರೆ. ಕೇವಲ ವಸ್ತು, ವಾಹನಗಳಷ್ಟೇ ಅಲ್ಲ, ನೀರಿಗೆ ಬಿದ್ದ ನೂರಾರು ಜೀವಗಳನ್ನು ರಕ್ಷಣೆ ಮಾಡಿದ ಹೆಗ್ಗಳಿಕೆ ಅವರದ್ದು. ಈವರೆಗೆ, ಸುಮಾರು 900 ಶವಗಳನ್ನು ಎತ್ತಿ ತಂದಿದ್ದಾರೆ.
