ಕಳಸ : ತಾಲೂಕಿನ ಗಣಪತಿ ಕಟ್ಟೆ ಬಳಿ ಕಾರೊಂದು ಸೋಮಾವತಿ ನದಿಗೆ ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ದಂಪತಿಯ ಜೀವ ಉಳಿದಿದೆ. ಬಂಡೆ ಅಡ್ಡ ಸಿಗದೇ ಇದ್ದಿದ್ದರೆ ಕಾರಿನ ಸಮೇತ ದಂಪತಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇನ್ನೂ ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಕಾರಿಗೆ ಹಗ್ಗ ಕಟ್ಟಿ ಮೇಲೆಳೆದು ದಂಪತಿಯ ಪ್ರಾಣ ರಕ್ಷಿಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೋಮಾವತಿ ನದಿಗೆ ತಡೆಗೋಡೆ ಇಲ್ಲ. ಈಗಾಗಲೇ 3-4 ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
