ಉಡುಪಿ: ನಗರದ ಅಂಬಾಗಿಲು ವಾರ್ಡ್ನ ಕಕ್ಕುಂಜೆ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ, ನೈಲಾನ್ ಹಗ್ಗ ಕುತ್ತಿಗೆಗೆ ಬಿಗಿದು ರುಂಡ ಬೇರ್ಪಟ್ಟ ಘಟನೆ ನಡೆದಿದೆ. ಮೃತರನ್ನು ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ.
ಮೃತ ಪುರುಷೋತ್ತಮ ನಾಯಕ್ ಅವರು ತಮ್ಮ ಮನೆಯ ಬಾವಿಯಲ್ಲಿ ನೈಲಾನ್ ಹಗ್ಗದ ಸಹಾಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾವಿಗೆ ಹಾರಿದ ವೇಗಕ್ಕೆ ಹಗ್ಗ ಕುತ್ತಿಗೆಯನ್ನು ಬಿಗಿದು ರುಂಡ ಬೇರ್ಪಟ್ಟಿದ್ದು, ಇದರಿಂದಾಗಿ ಬಾವಿಯ ನೀರು ಸಂಪೂರ್ಣ ರಕ್ತಮಯವಾಗಿ ಕೆಂಪು ಬಣ್ಣಕ್ಕೆ ತಿರುಗಿದೆ.
ಪುರುಷೋತ್ತಮ ನಾಯಕ್ ಅವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರರಾಗಿದ್ದಾರೆ. ಇವರು ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದು, ನಿವೃತ್ತಿಯ ಹಂತದಲ್ಲಿದ್ದರು. ಇವರು ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಖಿನ್ನತೆಯ ಶಂಕೆ: ಮೃತರು ಕಳೆದ ಕೆಲವು ಸಮಯದಿಂದ ಆರ್ಥಿಕ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಸಜ್ಜನ ವ್ಯಕ್ತಿತ್ವದ ಪುರುಷೋತ್ತಮ ಅವರ ಸಾವು ಕಕ್ಕುಂಜೆ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
