ಮೂಡಿಗೆರೆ: ತಾಲೂಕಿನ ಪ್ರತಿಷ್ಠಿತ ಕ್ರಿಕೆಟ್ ಕ್ರೀಡಾಕೂಟವಾದ ‘ಗೋಣಿಬೀಡು ಪ್ರೀಮಿಯರ್ ಲೀಗ್’ (GPL) ಪಂದ್ಯಾವಳಿಯು ಇಂದು ಯಶಸ್ವಿಯಾಗಿ ತೆರೆ ಕಂಡಿತು.
ಸತತ 7 ವರ್ಷಗಳಿಂದ ನಡೆಯುತ್ತಾ ಬಂದಿರುವ ಈ ಕ್ರೀಡಾಕೂಟವನ್ನು ಹಿರಿಯರ ಮಾರ್ಗದರ್ಶನದಲ್ಲಿ ಅಜಿತ್ ಗೌಡ, ಶ್ರೀಮನ್ ಗೌಡ, ಮದನ್ ಗೌಡ ಮತ್ತು ಕೀರ್ತಿ ಅವರು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದರು. ಜಿಪಿಎಲ್ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ಈ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಫ್ರಾಂಚೈಸಿಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಆಯ್ಕೆ ಮಾಡಿ ಕ್ರೀಡಾಪಟುಗಳನ್ನು ಹುರಿದುಂಬಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗೋಣಿಬೀಡು ಪಂಚಾಯಿತಿ ಅಧ್ಯಕ್ಷ ವಿಜೇಂದ್ರ ಅವರು “ಹೋಬಳಿ ಮಟ್ಟದಲ್ಲಿ ಒಂದು ದೊಡ್ಡ ಮೈದಾನದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಶಾಸಕರ ಗಮನ ಸೆಳೆದು ಉತ್ತಮ ಕ್ರೀಡಾಂಗಣದ ವ್ಯವಸ್ಥೆ ಮಾಡಿಕೊಡಬೇಕು. ಕ್ರೀಡಾಪಟುಗಳಿಗೆ ಶಿಸ್ತು ಬಹಳ ಮುಖ್ಯ. ನಮ್ಮ ಹೋಬಳಿಯ ಯುವಕರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲೂ ಆಡಿ ಗ್ರಾಮಕ್ಕೆ ಕೀರ್ತಿ ತರಬೇಕು” ಎಂದು ಹಾರೈಸಿದರು.
ವಿಜೇತ ತಂಡಗಳು: ರೋಚಕವಾಗಿ ನಡೆದ ಪಂದ್ಯಾವಳಿಯಲ್ಲಿ ನ್ಯಾಷನಲ್ ಸ್ಟ್ರೈಕರ್ಸ್ ತಂಡ ಪ್ರಥಮ ಸ್ಥಾನ ಅಲಂಕರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಹಂ ಚಕ್ರವರ್ತಿ ತಂಡ ದ್ವಿತೀಯ ಸ್ಥಾನ ಪಡೆದರೆ, ರಕ್ಷು ಅಚೀವರ್ಸ್ ಮತ್ತು ದೃಷಿ ಇಲೆವೆನ್ ತಂಡಗಳು ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನಗಳನ್ನು ಪಡೆದುಕೊಂಡವು.
ವೈಯಕ್ತಿಕ ಸಾಧನೆಗಳು:
- ಮ್ಯಾನ್ ಆಫ್ ದಿ ಸಿರೀಸ್: ಹೇಮಂತ್ ಕಿರಗುಂದ
- ಬೆಸ್ಟ್ ಬ್ಯಾಟ್ಸ್ಮನ್: ಮನು
- ಬೆಸ್ಟ್ ಬೌಲರ್: ಪ್ರದೀಪ್
- ಬೆಸ್ಟ್ ಫೀಲ್ಡರ್: ಕಿರಣ್
- ಬೆಸ್ಟ್ ಕೀಪರ್: ರೇವನಾಥ್
- ಉತ್ತಮ ಸಮವಸ್ತ್ರ ಪ್ರಶಸ್ತಿ: ಗೋಣಿಬೀಡು ಟೈಟನ್ಸ್
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ನವೀನ್, ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ, ಸುನಿಲ್ ಮಣ್ಣಿಕೆರೆ, ಹರೀಶ್ ಜಂಶೀದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
