ಚಿಕ್ಕಮಗಳೂರು: ತರಿಕೆರೆಯ ಶ್ರೀಗಂಧ ಬೆಳೆಗಾರನೋರ್ವ ಸರ್ಕಾರಿ ವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ತಾನು ಬದುಕಿದ್ದಾಗಲೇ ತನ್ನ ವೈಕುಂಠ ಸಮಾರಾಧನೆಗೆ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.
ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದ ಶ್ರೀಗಂಧದ ಬೆಳೆಗಾರ ವಿಷುಕುಮಾರ್ ಅವರು ಬದುಕಿದ್ದಾಗಲೇ ತಮ್ಮದೇ ವೈಕುಂಠ ಸಮಾರಾಧನೆಗೆ ಅಧಿಕಾರಿಗಳನ್ನು ಆಹ್ವಾನಿಸುವ ಮೂಲಕ ವ್ಯವಸ್ಥೆಯ ವಿರುದ್ಧ ಅಣಕವಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕಳೆದುಕೊಂಡಿರುವ ಇವರು, ಫೆ.9ರ ಬೆಳಗ್ಗೆ 10 ಗಂಟೆಗೆ ಸಂತಾಪ ಸಭೆ ಹಾಗೂ ಮಧ್ಯಾಹ್ನ 1 ಗಂಟೆಗೆ ತಿಥಿ ಊಟವನ್ನು ಏರ್ಪಡಿಸಿ ಅದಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಇವರ ಫಲವತ್ತಾದ ಕೃಷಿ ಭೂಮಿ ಹಾಗೂ ಬೆಲೆ ಬಾಳುವ ಶ್ರೀಗಂಧದ ಮರಗಳು ಸ್ವಾಧೀನಕ್ಕೆ ಒಳಗಾಗಿವೆ. ಅರಣ್ಯಾಧಿಕಾರಿಗಳು ಒಂದು ಮಾವಿನ ಮರಕ್ಕೆ 63 ಸಾವಿರ ರೂ. ತೆಂಗಿಗೆ 37 ಸಾವಿರ ರೂ. ನಿಂಬೆಗೆ 3,480 ರೂ. ಮತ್ತು ಬೇವಿಗೆ 2,200 ರೂ. ಪರಿಹಾರ ನೀಡಿದ್ದಾರೆ. ಅತ್ಯಂತ ದುಬಾರಿಯಾದ ಶ್ರೀಗಂಧದ ಮರಕ್ಕೆ ಕೇವಲ 420 ರೂ. ನಿಗದಿಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ಈ ರೀತಿ ವಿನೂತನವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
