ಚಿಕ್ಕಮಗಳೂರು: ಮಹಾಶಿವರಾತ್ರಿಯಂದು ಶಿವನ ತವರು ಎಂದೇ ಭಾವಿಸಿರುವ ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸಬೇಕೆಂದು ಅಸಂಖ್ಯಾತ ಭಕ್ತರು ನೆತ್ತಿಯ ಮೇಲೆ ಸುಡು ಬಿಸಿಲು, ಇದರ ಝಳಕ್ಕೆ ಕಾದಿರುವ ಡಾಂಬರ್ ರಸ್ತೆ, ಉತ್ಸಾಹ ಕುಗ್ಗದೆ ಸಾಗುತ್ತಿರುವ ಪಾದಯಾತ್ರಿಗಳು ಅಪಘಾತದ ಭಯದಲ್ಲೇ ಹೆಚ್ಚೆ ಹಾಕುತ್ತಿದ್ದಾರೆ.
ಹೀಗೆ ಸಾಗುವ ಭಕ್ತರಿಗೆ ದಾರಿಯುದ್ದಕ್ಕೂ ನೂರಾರು ಕಷ್ಟಗಳು. ಭಕ್ತರು ಅದೆಲ್ಲವನ್ನೂ ಮೆಟ್ಟಿ ನೂರಾರು ಕಿ.ಮೀ. ಪಾದಯಾತ್ರೆ ಹೊರಟು ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.

ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೂಡ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲು ಕೊಟ್ಟಿಗೆಹಾರಕ್ಕೆ ಬರಲೇಬೇಕು. ಈಗಾಗಲೇ ನಿತ್ಯ ನೂರಾರು ಜನ ಕೊಟ್ಟಿಗೆಹಾರ ದಾಟಿ ಚಾರ್ಮಾಡಿ ಘಾಟಿ ಇಳಿಯುತ್ತಿದ್ದಾರೆ ಪಾದಯಾತ್ರೆ ಹೊರಟ ಭಕ್ತರಿಗೆ ಚಾರ್ಮಾಡಿ ಘಾಟಿ ಭಯ ತರಿಸಿದೆ. ಯಾಕಂದ್ರೆ, ಈಗಾಗಲೇ ಚಾರ್ಮಾಡಿ ಘಾಟಿಯಲ್ಲಿ ಆನೆ ಕಾಟ ಇದೆ. ಕೊಟ್ಟಿಗೆಹಾರ ತಪ್ಪಲಿನ ಹಲವು ಗ್ರಾಮಗಳಲ್ಲಿ ಹುಲಿ ಭಯ ಕೂಡ ಇದೆ. ಈ ಮಧ್ಯೆ ಚಾರ್ಮಾಡಿ ಘಾಟಿಯ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಓಡಾಡುವ ವಾಹನಗಳ ವೇಗ ಭಕ್ತರಲ್ಲಿ ಭಯ ತರಿಸಿರೋದಂತೂ ಸತ್ಯ.
ಹಾಗಾಗಿ, ಕೊಟ್ಟಿಗೆಹಾರದ ಸ್ಥಳಿಯರು ಹಾಗೂ ಪೊಲೀಸರು ಕೂಡ ಚೆಕ್ ಪೋಸ್ಟ್ಗಳಲ್ಲಿ ವಾಹನಗಳಿಗೆ ನಿಧಾನಕ್ಕೆ ಚಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಚಾರ್ಮಾಡಿ ಘಾಟಿಯ ಕೆಲ ಜಾಗದಲ್ಲಿ ಕಿರಿದಾದ ರಸ್ತೆ, ಹಾವು-ಬಳುಕಿನ ಮೈಕಟ್ಟನ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಡ್ತಿರೋದು ಭಕ್ತರ ಆತಂಕಕ್ಕೂ ಕಾರಣವಾಗಿದೆ. ನಿತ್ಯ ಸಾವಿರಾರು ಭಕ್ತರು ಈ ಮಾರ್ಗದಲ್ಲಿ ಪಾದಯಾತ್ರೆ ಮಾಡುತ್ತಿದ್ದು ಭಕ್ತರು ಭಯದಲ್ಲೇ ನಡೆಯುವಂತಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಹಗಲಿರುಳೆನ್ನದೇ ಒಂಟಿ ಸಲಗ ಆಗಾಗ ಗಂಟೆಗಟ್ಟಲೇ ರಸ್ತೆ ಮಧ್ಯೆ ಬಂದು ನಿಲ್ಲುತ್ತೆ. ಶನಿವಾರದವರೆಗೂ ಚಾರ್ಮಾಡಿ ಘಾಟಿಯ 22 ಕಿ.ಮೀ. ಉದ್ದಕ್ಕೂ ಸಾವಿರಾರು ಪಾದಯಾತ್ರಿಗಳು ಯಾತ್ರೆ ಕೈಗೊಂಡಿದ್ದು ಅತ್ಯಂತ ಎಚ್ಚರಿಕೆಯಿಂದಿರಬೇಕಿದೆ.

