ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಚಿಕ್ಕಮಗಳೂರು ತಾಲ್ಲೂಕಿನ ಮರ್ಲೆ ಗ್ರಾಮದ ಕಲ್ಲು ಕ್ವಾರಿ ಹಾಗೂ ಅರಣ್ಯದ ಅಂಚಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ಭಾಗದಲ್ಲಿ ಹುಲಿಯ ಚಲನವಲನ ಖಚಿತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ತುರ್ತು ಮುನ್ನೆಚ್ಚರಿಕೆ ನೀಡಿದ್ದು ಮರ್ಲೆ, ನಾಗರಹಳ್ಳಿ ಹಾಗೂ ಕಳಸಾಪುರ ಗ್ರಾಮಗಳ ನಿವಾಸಿಗಳು ಅತೀವ ಜಾಗರೂಕತೆಯಿಂದ ಇರಬೇಕು ಎಂದು ಸೂಚಿಸಿದೆ.
ಅರಣ್ಯದ ಅಂಚಿನಲ್ಲಿ ಜಮೀನು ಹೊಂದಿರುವ ಮಾಲೀಕರು ಮತ್ತು ಗ್ರಾಮಸ್ಥರು ಅನಾವಶ್ಯಕ ಓಡಾಟವನ್ನು ನಿಲ್ಲಿಸಬೇಕು ಹಾಗೂ ಕೃಷಿ ಚಟುವಟಿಕೆಗಳ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಮುಖ್ಯವಾಗಿ ಸಾಕು ಜಾನುವಾರುಗಳನ್ನು ಮೇಯಿಸಲು ಅರಣ್ಯದ ಅಂಚಿಗೆ ಬಿಡಬಾರದೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ಅರಣ್ಯ ಅಧಿಕಾರಿಗಳು ಹುಲಿಯ ಚಲನವಲನದ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.
