ಚಿಕ್ಕಮಗಳೂರು: ಕಾಡಾನೆಯೊಂದು ಬೈಕ್ ಅಡ್ಡಗಟ್ಟಿ ತುಳಿದು ಹಾಕಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ನಡೆದಿದೆ. ಈ ವೇಳೆ ಬೈಕ್ ಬಿಟ್ಟು ಸವಾರ ಅಲ್ಲಿಂದ ಓಡಿ ಹೋಗಿದ್ದು ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ.

ಕಾಡಾನೆಯ ಸಿಟ್ಟಿಗೆ ಬೈಕ್ನ ಮುಂಭಾಗ ಪುಡಿಪುಡಿಯಾಗಿದ್ದು, ಸಾಕಷ್ಟು ಹಾನಿಯಾಗಿದೆ. ಕಾಡಾನೆ ಕಾಣುತ್ತಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದರಿಂದ ಸವಾರನ ಜೀವ ಉಳಿದಿದೆ. ಕಾಡಾನೆ ಸೆರೆಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಲ್ಲಿ ವರ್ಷದಲ್ಲಿ 9 ಜನ ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಹೋರಾಡಿದ ಹೋರಾಟಗಾರರು ಪೊಲೀಸರಿಂದ ಒದೆ ತಿಂದು, ಕೇಸ್ ಹಾಕಿಸಿಕೊಂಡಿದ್ದಾರೆ. ಮತ್ತೊಂದು ಅನಾಹುತಕ್ಕೂ ಮುನ್ನವೇ ಕಾಡಾನೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಜನ ಪಟ್ಟುಹಿಡಿದಿದ್ದಾರೆ.

ಇತ್ತೀಚೆಗೆ ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ ಮತ್ತಾವರ ಗ್ರಾಮದ ಆಸುಪಾಸಿನಲ್ಲಿ ಸಹ ಬೀಡು ಬಿಟ್ಟಿದ್ದವು. ಇದರಿಂದ ಗ್ರಾಮಗಳ ಜನ ಮಾತ್ರವಲ್ಲದೇ ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸುವಂತೆ ಮಾಡಿದೆ.
