ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೂಡಿಗೆರೆ ಲಯನ್ಸ್ ವೃತ್ತದಿಂದ ದ್ವಿಚಕ್ರ ವಾಹನಗಳ ಜಾಥಾ ಹೊರಟು ಕೊಟ್ಟಿಗೆಹಾರಕ್ಕೆ ತಲುಪಿತು. ನಂತರ ಅಂಬೇಡ್ಕರ್ ಯುವಕ ಸಂಘದವರೊಂದಿಗೆ ಸೇರಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಾಳೂರು ರಘುಪತಿ ಅವರು, “ಡಾ. ಅಂಬೇಡ್ಕರ್ ಅವರು ಜಾತಿ ಮತ ಭೇದವಿಲ್ಲದೆ ಸಮಾನತೆ, ನ್ಯಾಯ ಮತ್ತು ಮಾನವೀಯತೆ ಸಾರಿದ ಮಹಾನ್ ನಾಯಕರು. ಅವರ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿದಾಗ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ,” ಎಂದು ಹೇಳಿದರು.
ಸಮಿತಿಯ ಮಾರ್ಗದರ್ಶಕರಾದ ಮೂಡಿಗೆರೆ ಅನಂತ್ ಮಾತನಾಡಿ, “ಅಂಬೇಡ್ಕರ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಕರು ಅವರ ಮಾರ್ಗವನ್ನು ಅನುಸರಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಟ್ಟಿಗೆಹಾರ ಅಂಬೇಡ್ಕರ ಸಂಘದ ಅಧ್ಯಕ್ಷ ಪ್ರತಾಪ್ ಹಾಗೂ ಸದಸ್ಯರು, ಮೂಡಿಗೆರೆ ಅಂಬೇಡ್ಕರ್ ಆಚರಣಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಗ್ರಾಮಗಳ ಅಂಬೇಡ್ಕರ್ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ರಘು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
