ಮೂಡಿಗೆರೆ: ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ ವಾಹನವೊಂದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವ ಮೂಲಕ ಕಳ್ಳಬೇಟೆಗೆ ಬಳಿಸಿದ ವಸ್ತುಗಳು ಹಾಗೂ ವಾಹನವನ್ನು ತಾಲೂಕಿನ ಜೋಗಣ್ಣನಕೆರೆ ಬಸ್ ನಿಲ್ದಾಣದ ಸಮೀಪ ಬುಧವಾರ ವಶಪಡಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಮೂಡಿಗೆರೆ ವಲಯದ ಹಾಲೂರು, ಜೋಗಣ್ಣನಕೆರೆ ಬಸ್ ಸ್ಟಾಂಡ್ ಹತ್ತಿರ ಬಂದಂತಹ ವಾಹನಗಳನ್ನು ಬುಧವಾರ ತಪಾಸಣೆ ಮಾಡುತ್ತಿದ್ದಾಗ, ಪಿಕಪ್ ವಾಹನವೊಂದು ಸ್ಥಳದಲ್ಲಿ ನಿಲ್ಲಿಸದೇ ವೇಗವಾಗಿ ಮುಂದೆ ಸಾಗಿದೆ. ಇದರಿಂದ ವಾಹನವನ್ನು ಹಿಂಬಾಲಿಸಿ ತಡೆಗಟ್ಟಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮೃತಪಟ್ಟ 3 ಪುನುಗುಬೆಕ್ಕುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ವಾಹನದಲ್ಲಿದ್ದ ನಾಲ್ವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳಾದ ತಾಲೂಕಿನ ಅಬಚೂರು ಗ್ರಾಮದ ಎ.ಜೆ.ನಂದನ್ (38), ಹಾಲೂರು ಗ್ರಾಮದ ಎಚ್.ಜಿ.ಆದರ್ಶ (33) ಅವರನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳಾದ ಹಳೆಮೂಡಿಗೆರೆ ಗ್ರಾಮದ ಪ್ರಿತಮ್ (34), ಹಾಲೂರು ಗ್ರಾಮದ ಚಿದಾನಂದ (40) ತಲೆಮರೆಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಎಚ್.ಜಿ.ಕರುನಾಕರಮೂರ್ತಿ (60), ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಕೃಷ್ಣಪ್ಪ (45) ಸಹಕರಿಸಿದ್ದಾರೆಂದು ತಿಳಿದು ಬಂದಿದ್ದು, ನಾಲ್ವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ವಾಹನದಲ್ಲಿದ್ದ 3 ಪುನುಗುಬೆಕ್ಕುಗಳ ಮೃತ ದೇಹ, ಕೃತ್ಯಕ್ಕೆ ಬಳಸಿರುವ 2 ಒಂಟಿ ನಳಿಕೆ ಬಂದೂಕು, 4 ತೋಟ, 1 ಟಾರ್ಚ್, ಆರೋಪಿಗಳ 2 ಮೊಬೈಲ್ ಮತ್ತು ಕಳ್ಳಸಾಗಾಣಿಕೆಗೆ ಬಳಸಿರುವ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ ವಾಹನ ವಶ ಪಡೆಸಿಕೊಡು ಪ್ರಕರಣ ದಾಖಲಿಸಲಾಗಿದೆ.

ಡಿಸಿಎಫ್ ರಮೇಶ್ ಬಾಬು, ಎಸಿಎಫ್ ಟಿ.ಎಂ.ಆಕರ್ಷ್ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಮಂಜುನಾಥ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಬೀಡು ಉಪ ವಲಯ ಅರಣ್ಯಾಧಿಕಾರಿ ರವಿರಾಜ್, ಗಸ್ತು ಅರಣ್ಯ ಪಾಲಕರಾದ ಪರಮೇಶ್, ಎ.ವಿ.ಶಿವರಾಜ್, ವಿ.ಎಸ್.ಆದರ್ಶ್, ವಾಚರ್ ಬಿ.ಕೆ.ಉದಯ್ ಬಿ.ಕೆ. ವಾಹನ ಚಾಲಕ ನವರಾಜ್ ಭಾಗವಹಿಸಿದ್ದರು.
