ಚಿಕ್ಕಮಗಳೂರು: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾಗಿ ಕೇಳಿಬರುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ನಗರದ ಮಧ್ಯರಸ್ತೆಯಲ್ಲೇ ಕೆಎಸ್ಆರ್ಟಿಸಿ ಬಸ್ವೊಂದು ಕೆಟ್ಟು ನಿಂತಿದ್ದು, ಪ್ರಯಾಣಿಕರೇ ಬಸ್ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ‘ಕರ್ನಾಟಕ ಪೋರ್ಟ್ಫೋಲಿಯೋ’ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸದ್ಯ ಈ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ನಗರದ ಎನ್ಎಂಸಿ (NMC) ಸಿಗ್ನಲ್ ಬಳಿ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಟ್ರಾಫಿಕ್ ದಟ್ಟಣೆ ಇರುವ ಪ್ರದೇಶದಲ್ಲೇ ಬಸ್ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ವೇಳೆ ಪ್ರಯಾಣಿಕರು ಅನಿವಾರ್ಯವಾಗಿ ಬಸ್ನಿಂದ ಕೆಳಗಿಳಿದು ರಸ್ತೆಯಲ್ಲೇ ಬಸ್ ತಳ್ಳುವ ಮೂಲಕ ಡಿಪೋಗೆ ಕಳುಹಿಸಿಕೊಟ್ಟಿದ್ದಾರೆ.
