ಮೂಡಿಗೆರೆ:ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಸಮನ್ವಯವಾಗಿ ತಲುಪಿಸುವುದು ಸಮಾಜದ ಪ್ರಮುಖ ಕರ್ತವ್ಯವಾಗಿದೆ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ರಾಷ್ಟ್ರೀಯ ಮಂಡಳಿ ಸದಸ್ಯರಾದ ಸಿಕೆ ಇಬ್ರಾಹಿಂ ಹಾಜಿ ಅಭಿಪ್ರಾಯಪಟ್ಟರು.

ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಶಿಕ್ಷಣವೇ ಸಮಾಜ ಪರಿವರ್ತನೆಯ ಬುನಾದಿ. ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಶಿಕ್ಷಣದ ಬೆಳಕು ಎಲ್ಲೆಡೆ ಹರಡಲು ಸಾಧ್ಯ” ಎಂದು ಹೇಳಿದರು. ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಮಾತ್ ಸದಸ್ಯರು, ತಾಲೂಕಿನ ಮುಖಂಡರು ಹಾಗೂ ಗಣ್ಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
1954ರಲ್ಲಿ ಕೇರಳದಲ್ಲಿ ಆರಂಭವಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇಂದು ದೇಶದಾದ್ಯಂತ 11,000ಕ್ಕೂ ಹೆಚ್ಚು ಮದರಸಗಳು ಮತ್ತು ಅರಬಿ ಕಾಲೇಜುಗಳನ್ನು ಹೊಂದಿದ್ದು, ಬಡ ಕುಟುಂಬಗಳ ಮಕ್ಕಳಿಗೆ ವಸತಿ ಸೌಲಭ್ಯ ಸಮೇತ ಶಿಕ್ಷಣ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಮುನೀರ್ ಮಾತನಾಡಿ, “ಸಂಘ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಕ್ಕಳ ಶಿಕ್ಷಣ ವಂಚನೆ ತಪ್ಪಿಸಲು ಸಾಧ್ಯ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮತೋಲನವೇ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ” ಎಂದು ಹೇಳಿದರು.
ಇಮ್ದಾನಿ ಉಸ್ತಾದ್, ಮೂಡಿಗೆರೆ ಧರ್ಮಗುರು ಯಮನಿ ಉಸ್ತಾದ್ ಹಾಗೂ ಸುಲೈಮಾನ್ ಉಸ್ತಾದ್ ಜ್ಞಾನ ಪ್ರಸಾರದ ಅಗತ್ಯತೆಯನ್ನು ಒತ್ತಿಹೇಳಿದರು. ಹಸೇನ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಫಿಶ್ ಮರ್ಚಂಟ್ ಹಮ್ಜಾ (ಮಂಗಳೂರು), ಮೂಡಿಗೆರೆ ಬದ್ರಿಯಾ ಮಸ್ಜಿದ್ ಅಧ್ಯಕ್ಷ ಶರೀಫ್, ಹಮೀದ್ (ಗಲ್ಫ್ ಅಸೋಷಿಯನ್ಸ್), ಆಸೀಫ್, ಇಬ್ರಾಹಿಂ ಹಾಜಿ, ಚಕ್ ಮಕ್ಕಿ ಅಯ್ಯುಬ್ ಹಾಜಿ, ಮಾಗುಂಡಿ ಅಯ್ಯುಬ್ ಹಾಜಿ, ಉಮ್ಮರ್ ಬಣಕಲ್, ಟಿ.ಎ. ಖಾದರ್, ಬಾವಕ್ಕ, ಸಿದ್ದಿಕ್, ಅಜೀದ್, ಫಾರುಕ್ ಸೇರಿದಂತೆ ಜಮಾತ್ ಸದಸ್ಯರು ಹಾಗೂ ಹಲವರು ಉಪಸ್ಥಿತರಿದ್ದರು.
