ಚಿಕ್ಕಮಗಳೂರು: ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರುಎಣಿಗೆ ಮೇ 2ರಂದು ನಡೆಯಲಿದೆ.
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 8 ಗಂಟೆಗೆ ಚುನಾವಣಾಧಿಕಾರಿ ಗೌರವಶೆಟ್ಟಿ ನೇತೃತ್ವದಲ್ಲಿ ನಾಲ್ಕು ಮಂದಿ ಸಹಾಯಕ ಚುನಾವಣಾಧಿಕಾರಿಗಳು ಅಂಚೆಮತಗಳ ಮರು ಎಣಿಕೆಯಾಗುತ್ತಿದ್ದು, ಮರುಮತ ಎಣಿಗೆ 1 ಟೇಬಲ್ಮಾತ್ರ ಹಾಕಲಾಗುತ್ತಿದೆ. ಎಣಿಕೆ ಕೊಠಡಿಯೊಳಗೆ ಕ್ಯಾಮರವನ್ನು ಅಳವಡಿಸಲಾಗುತ್ತಿದೆ.
ಈಗಾಗಲೇ ಶಾಸಕರಾಗಿ ಆಯ್ಕೆಯಾಗಿರುವ ಟಿ.ಡಿ.ರಾಜೇಗೌಡ ಅವರ ಚುನಾವಣಾ ಏಜೆಂಟರು ಮತ್ತು ಪಾರಭವಗೊಂಡಿದ್ದ ಡಿ.ಎನ್.ಜೀವರಾಜ್ ಅವರ ಚುನಾವಣಾ ಏಜೆಂಟರು ಮತಗಳ ಮರುಎಣಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಶಾಸಕರು ಮಾಜಿ ಶಾಸಕರು ಭಾಗಿಯಾಗುವ ಸಾಧ್ಯತೆಗಳಿವೆ.
ಹೈಕೋರ್ಟ್ ಸೂಚನೆ ಮೇರೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರು ಎಣಿಗೆ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮರುಮತ ಎಣಿಗೆ ತಡೆಕೋರಿ ಅರ್ಜಿಸಲ್ಲಿಸಲು ನೀಡಿರುವ ಕಾಲಾವಧಿ ಏ.೨೦ಕ್ಕೆ ಮುಕ್ತಾಯಗೊಂಡಿದ್ದು, ನಂತರ 2 ವಾರದೊಳಗೆ ಮತಗಳ ಮರುಪರಿಶೀಲನೆ ಪ್ರಕ್ರಿಯೆ ಮುಗಿಸಲೇಬೇಕಾಗಿದ್ದು, ಹಾಗಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮತಗಳ ಎಣಿಕೆಗೆ ಚುನಾವಣಾಧಿಕಾರಿ ನೇಮಕಮಾಡಬೇಕೆಂದು ಜಿಲ್ಲಾಡಳಿತ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರಬರೆದಿತ್ತು. ಆಯೋಗವು ಚುನಾವಣಾಧಿಕಾರಿಯಾಗಿ ಗೌರವಶೆಟ್ಟಿ ಅವರನ್ನು ನೇಮಕ ಮಾಡಿದೆ.ಇವರೊಂದಿಗೆ ನಾಲ್ಕುಮಂದಿ ಸಹಾಯಕ ಚುನಾವಣಾಧಿಕಾರಿಗಳು ಮರು ಮತ ಎಣಿಕೆಯಲ್ಲಿ ಭಾಗಿಯಾಗುವರು.
ಕಳೆದ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ಡಿ.ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಎನ್.ಜೀವರಾಜ್ ಅವರನ್ನು211 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಚಲಾವಣೆಯಾಗಿದ್ದ 2811 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತಗೊಂಡಿದ್ದು, ಇದಕ್ಕೆ ಜೀವರಾಜ್ ಆಕ್ಷೇಪವ್ಯಕ್ತಪಡಿಸಿದ್ದರು.
ಫಲಿತಾಂಶ ಪ್ರಕಟಗೊಂಡಾಗ ಡಿ.ಎನ್.ಜೀವರಾಜ್ ಅಂಚೆಮತಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಆಗ ಜಿಲ್ಲಾ ಚುನಾವಣಾಧಿಕಾರಿಗಳ ಇವರ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲವೆಂದು ಜೀವರಾಜ್ ಆರೋಪಿಸಿದ್ದರು.ಅಂಚೆ ಮತಗಳ ಮರು ಎಣಿಗೆಗೆ ಅವಕಾಶನೀಡಬೇಕೆಂದು ಕೋರಿ ೨೦೨೩ರ ಜೂನ್ ೨೭ರಂದು ಹೈಕೋರ್ಟ್ಮೊರೆ ಹೋಗಿದ್ದರು.
ಉಚ್ಚನ್ಯಾಯಾಲಯದ ಏಕ ಸದಸ್ಯಪೀಠ 275 ಅಂಚೆ ಮತಗಳ ಮರಎಣಿಕೆಗೆ ಏ 6ರಂದು ಸೂಚನೆ ನೀಡಿರುವುದರೊಂದಿಗೆ ಆಕ್ಷೇಪಣೆ ಸಲ್ಲಿಸಲು 2 ವಾರಗಳ ಕಾಲಾವಕಾಶ ನೀಡಿತ್ತು.ಶಾಸಕ ಟಿ.ಡಿ.ರಾಜೇಗೌಡ ಅವರು ಆಕ್ಷೇಪಣೆ ಸಲ್ಲಿಸಲು ಮುಂದಾಗದಿರುವುದರಿಂದ ತಿರಸ್ಕೃತ 275 ಅಂಚೆಮತಗಳ ಮರು ಎಣಿಕೆಗೆ ಜಿಲ್ಲಾಡಳಿತ ಮೇ 2ಕ್ಕೆ ದಿನಾಂಕ ನಿಗದಿಪಡಿಸಿದೆ.
