ಮೂಡಿಗೆರೆ: ದುಂದುವೆಚ್ಚ ಮಾಡಿ ಅದ್ದೂರಿಯಾಗಿ ಮದುವೆ ಮಾಡಿದರೆ ಪ್ರಯೋಜನವಿಲ್ಲ. ಕಡಿಮೆ ಖರ್ಚಿನಲ್ಲಿ ಸರಳವಾಗಿ ಮದುವೆ ಕಾರ್ಯ ಪೂರೈಸಿದರೆ ಮದುವೆಗಾಗಿ ಸಾಲ ಮಾಡುವುದು ಅದನ್ನು ತೀರಿಸಲು ಜೀವಮಾನವಿಡಿ ಜೀತದಾಳಿನಂತೆ ದುಡಿಯುವುದು ತಪ್ಪುತ್ತದೆ ಎಂದು ಮಾಜಿ ಸಚಿವೆ ಡಾ.ಮೋಟಮ್ಮ ಅಭಿಪ್ರಾಯಪಟ್ಟರು.
ಅವರು ಮೂಡಿಗೆರೆಯಲ್ಲಿ ಮೇ.14ರಂದು ನಡೆಯಲಿರುವ 25ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿನ್ನಲೆಯಲ್ಲಿ ವದೂವರರಿಗೆ ಉಡುಗೆ ಮತ್ತಿತರೆ ಪರಿಕರಗಳನ್ನು ವಿತರಿಸಿ ಮಾತನಾಡಿದರು. 25 ವರ್ಷದ ಹಿಂದೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸುವ ಮೊದಲು ಬಡವರ್ಗದವರು ಕೂಡ ಆಡಂಬರದ ಮದುವೆಗಾಗಿ ಸಾಲ ಮಾಡಿ ತಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡುತ್ತಿದ್ದರು. ಮದುವೆಯ ನಂತರ ದಂಪತಿಗಳು ಮತ್ತವರ ಪೋಷಕರು ಜೀವನಪೂರ್ತಿ ದುಡಿದು ಮದುವೆಯ ಸಾಲ ತೀರಿಸಬೇಕಾಗಿತ್ತು. ನಾನು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದ ಬಳಿಕ ಬಹುತೇಕ ಹೆಚ್ಚಿನ ಜನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇದರಿಂದ ಸಾಲ ಮಾಡುವುದು ಮತ್ತು ದುಡಿದ ಹಣದಲ್ಲಿ ಸಾಲವನ್ನು ತೀರಿಸುವುದು ತಪ್ಪಿದೆ. ಸರಳವಾಗಿ ಸಾಮೂಹಿಕ ಕಾರ್ಯಕ್ರಮದಲ್ಲಿ ಮದುವೆಯಾದರೆ ದುಂದುವೆಚ್ಚವನ್ನು ತಡೆಯುವ ಜೊತೆಗೆ ಸಾಲಗಾರರ ಕಾಟದಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.
ಮೇ14ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 10 ಜೋಡಿ ಸತಿಪತಿಗಳಾಗಲಿದ್ದಾರೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೊಸಕೆರೆ ರಮೇಶ್, ಸುಧೀರ್ ಚಕ್ರಮಣಿ, ಬಿ.ಎಂ.ಶಂಕರ್, ದೇವರಾಜ್ ಸಬ್ಲಿ, ಸುರೇಂದ್ರ, ಎಚ್.ಟಿ.ಸುಬ್ರಮಣ್ಯ, ಸಿ.ಬಿ.ಶಂಕರ್, ಕೆ.ಎಲ್.ಸಾಗರ್, ಬಿ.ಇ. ಬಿಳಿಯಪ್ಪ, ಪುಟ್ಟರಾಜ್,ಲೋಕೇಶ್, ರವಿ ಸೇರಿದಂತೆ ಮತ್ತಿತರರಿದ್ದರು.
