ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ವರುಣ ಧಾರಾಕಾರವಾಗಿ ಅಬ್ಬರಿಸಿದ್ದು ಇದರ ನಡುವೆ ಮೂಡಿಗೆರೆ ತಾಲೂಕಿನ ಗೌಡಳ್ಳಿಯ ಬಿಳ್ಳೂರು ಗ್ರಾಮದ ಬಳಿ ಬೈಕ್ ಸವಾರರ ಬೇಜವಾಬ್ದಾರಿತನದ ವರ್ತನೆ ಕಂಡುಬಂದಿದೆ.
ಮಳೆಯಿಂದಾಗಿ ವಿದ್ಯುತ್ ಕಂಬವೊಂದು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಸವಾರರು ಅದರ ಪಕ್ಕದಲ್ಲೇ ಸಾಗುವ ಮೂಲಕ ಪ್ರಾಣಾಪಾಯವನ್ನು ತಂದೊಡ್ಡಿಕೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಕಂಡು ವಾಹನಗಳನ್ನು ನಿಲ್ಲಿಸಿಕೊಂಡಿದ್ದವರು ಮುಂದೆ ಹೋಗಬೇಡಿ ಎಂದು ಎಚ್ಚರಿಸಿದರೂ ಸಹ ಅದನ್ನು ನಿರ್ಲಕ್ಷಿಸಿ ಸವಾರರು ಮುಂದೆ ಸಾಗಿದ್ದಾರೆ. ಸವಾರರು ಕಂಬದ ಹತ್ತಿರ ಹೋಗುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್ ಮತ್ತಷ್ಟು ಹೆಚ್ಚಾಗಿ ಸಿಡಿದಿರುವ ದೃಶ್ಯ ಅಲ್ಲಿದ್ದವರ ಮೊಬೈಲ್ನಲ್ಲಿ ಸೆರೆಯಾಗಿದೆ. ಒಂದು ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಅದೃಷ್ಟವಶಾತ್ ಸವಾರರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದು, ಇಂತಹ ಹುಚ್ಚಾಟಗಳು ಕೇವಲ ವೈಯಕ್ತಿಕ ಅಪಾಯ ಮಾತ್ರವಲ್ಲದೆ ಸಾರ್ವಜನಿಕ ಸುರಕ್ಷತೆಗೂ ಭೀತಿಯನ್ನುಂಟುಮಾಡುತ್ತವೆ.
