ಹಾಸನ: ತಾಲೂಕಿನ ಬಿಟ್ಟಗೋಡನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬನ ತರಾತುರಿ ಅಂತ್ಯಕ್ರಿಯೆ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪತ್ನಿ ಹಾಗೂ ಅಪ್ರಾಪ್ತ ಮಗ ಸೇರಿ ಹಲ್ಲೆ ಮಾಡಿ ಕೊಂದು, ಇನ್ಶೂರೆನ್ಸ್ ಹಣ ಕೈತಪ್ಪುತ್ತದೆ ಎಂದು ತರಾತುರದಲ್ಲಿ ಅಂತ್ಯಕ್ರಿಯೆ ನಡೆಸಿದ ಆರೋಪ ಕೇಳಿಬಂದಿದೆ
ಮೇ 18 ರಂದು ಹಾಸನ ನಗರದ ತಣ್ಣೀರುಹಳ್ಳದ ನಿವಾಸಿ ಗುರುಮೂರ್ತಿಯವರು ಮನೆಯಲ್ಲಿ ಮಂಚದ ಮೇಲೆ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದರು. ಆನಂತರ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಪತ್ನಿ ವೀಣಾ ಹಾಗೂ ಅಪ್ರಾಪ್ತ ಪುತ್ರ ಸೇರಿ ಗುರುಮೂರ್ತಿ ಮೇಲೆ ಹಲ್ಲೆ ನಡೆಸುವ ದೃಶ್ಯ ಸೆರೆಯಾಗಿರುವುದು ಗೊತ್ತಾಗಿತ್ತು. ಹಲ್ಲೆಯಿಂದಲೇ ಪುತ್ರ ಸಾವನ್ನಪ್ಪಿರುವುದಾಗಿ ಗುರುಮೂರ್ತಿ ತಾಯಿ ರೇಣುಕಮ್ಮ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ, ಹೂತಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಕಳೆದ ಹದಿನೇಳು ವರ್ಷದ ಹಿಂದೆ ಮೈಸೂರು ಮೂಲದ ಗುರುಮೂರ್ತಿ ಹಾಗೂ ಹಾಸನ ಮೂಲದ ವೀಣಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಗುರುಮೂರ್ತಿ ತಣ್ಣೀರುಹಳ್ಳದಲ್ಲಿ ಕೇರಳಾಪುರ ಮಿಲ್ಟ್ರಿ ಹೋಟೆಲ್ ನಡೆಸುತ್ತಿದ್ದು, ಹೊಸ ಮನೆ ನಿರ್ಮಿಸುತ್ತಿದ್ದರು. ಇದಕ್ಕಾಗಿ ಗುರುಮೂರ್ತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು.
