ಚಿಕ್ಕಮಗಳೂರು: ಮುಂಗಾರು ಬಿರುಗಾಳಿ ಮಳೆಗೆ ಸಂಭವನೀಯ ಅಪಾಯ, ಹಾನಿ ತಡೆಗಟ್ಟುವುದು ಹಾಗೂ ತುರ್ತು ಕ್ರಮ ವಹಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡಿಕೊಂಡು ರ್ಯಾಪಿಡ್ ರೆಸ್ಪಾನ್ಸ್ ತಂಡ ಮಾಡಿಕೊಳ್ಳಬೇಕು. ಆ ಮೂಲಕ ಅಗತ್ಯ ಇರುವ ಕಡೆ ಮುಂಜಾಗೃತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಮಳೆಗಾಲದಲ್ಲಿ ಮತ್ತು ಪ್ರವಾಹ ಸಂಭಾವ್ಯ ಸಮಯದಲ್ಲಿ ಅಗತ್ಯ ತುರ್ತು ವ್ಯವಸ್ಥೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಕೇಂದ್ರ ಸ್ಥಾನದಲ್ಲಿ ಲಭ್ಯರಿರಬೇಕು ಎಂದು ಆದೇಶಿಸಿದ್ದಾರೆ.
ಮೆಸ್ಕಾಂ ಇಲಾಖೆ ವತಿಯಿಂದ ಬೀಳುವ ಸ್ಥಿತಿಯಲ್ಲಿರುವ, ಶಿಥಿಲವಾಗಿರುವ, ದುಸ್ಥಿತಿಯಲ್ಲಿರುವ ವಿದ್ಯುತ್ ಕಂಬ ತಂತಿಗಳನ್ನು ತೆರವುಗೊಳಿಸುವುದು. ತುರ್ತು ಸಂದರ್ಭಗಳಲ್ಲಿ ಹಾನಿಯುಂಟಾದ ಸಂದರ್ಭಗಳಲ್ಲಿ ಕಂಬಗಳನ್ನು, ವಿದ್ಯುತ್ ಲೈನ್ಗಳನ್ನು ಸ್ಥಳಾಂತರಿಸುವ ಕಾರ್ಯ ನಿರ್ವಹಿಸಬೇಕು. ಅರಣ್ಯ ಇಲಾಖೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರ, ರಂಬೆಕೊಂಬೆಗಳನ್ನು ತೆರವು ಮಾಡಬೇಕು ಎಂದಿದ್ದಾರೆ.
ಮಳೆಹಾನಿ ತಡೆಗಟ್ಟುವ ತಂಡಕ್ಕೆ ಅಗತ್ಯ ಸುರಕ್ಷಾ ಪರಿಕರ, ಸಲಕರಣೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಬೇಕು. ನಗರ ವ್ಯಾಪ್ತಿಯಲ್ಲಿ ತಗ್ಗು ಮತ್ತು ಇಳಿಜಾರು ಪ್ರದೇಶಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಮಳೆನೀರು ಶೇಖರಣೆಯಿಂದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಹಳೆಯ ಸಾರ್ವಜನಿಕ ಕಟ್ಟಡಗಳನ್ನು, ಶಾಲಾ ಕಟ್ಟಡಗಳು ಹಾಗೂ ಇತರೆ ಅಪಾಯ ಸಂಭಾವ್ಯ ಕಟ್ಟಡಗಳನ್ನು ಗುರುತಿಸಿ ಸಾರ್ವಜನಿಕರ ಬಳಕೆಗೆ ನಿಷೇಧಿಸಬೇಕು. ಶಿಥಿಲಗೊಂಡಿರುವ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಬೇಕು. ಸ್ಥಳಾಂತರಿಸುವ ಅನಿವಾರ್ಯ ಸಂದರ್ಭಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದ್ದಾರೆ.
ಪ್ರವಾಹ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಯಂತ್ರೋಪಕರಣ, ವಾಹನಗಳನ್ನು ಕಾಯ್ದಿರಿಸಿಕೊಳ್ಳುವುದು ಮತ್ತು ಪ್ರವಾಹ ನೀರನ್ನು ಸುರಕ್ಷಿತ ದಿಕ್ಕಿನಲ್ಲಿ ಹರಿಯಲು ಅನುವಾಗುವಂತೆ ಕ್ರಮ ವಹಿಸಬೇಕು. ಪ್ರವಾಹದಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯಿಸಿ ಮುಂಜಾಗ್ರತಾ ಕ್ರಮ ವಹಿಸಬೇಕು. ಕೊಳಚೆ ಪ್ರದೇಶಗಳನ್ನು ಗುರುತಿಸಿ, ಪ್ರವಾಹದಿಂದ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಬದಲಿ ವ್ಯವಸ್ಥೆ ಮಾಡಬೇಕು. ತಗ್ಗು ಪ್ರದೇಶದ ಜನನಿಬಿಡ ಪ್ರದೇಶಗಳಿಗೆ ಪ್ರವಾಹ ಮುನ್ಸೂಚನೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಹಾಗೂ ಮಾಹಿತಿ ನೀಡಲು ತಿಳಿಸಿದ್ದಾರೆ.
