ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕರಿಮನೆ ಶಾಲೆಯಲ್ಲಿ ಡಚ್ ವಿವ್ಯೂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮತ್ತು ನಗು ಫೌಂಡೇಶನ್ ಬೆಂಗಳೂರು ಸಹಯೋಗದಲ್ಲಿ 20 ಶಾಲೆಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು (Nagu Foundation in Koppa).

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀನಿವಾಸ್ ರವರು ವಹಿಸಿದ್ದರು. ನೂತನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಜಯಣ್ಣ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ನಗು ಫೌಂಡೇಶನ್ ಕಾರ್ಯವನ್ನು ಪ್ರಶಂಸೆ ಮಾಡಿದರು.ಇದೆ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕರಿಗಳಾದ ಶ್ರೀಮತಿ ಯಶೋಧರವರು ಮಾತನಾಡಿ ದೀಪ್ತಿಯವರು ವಿದೇಶದಲ್ಲಿದ್ದುಕೊಂಡು ಭಾರತದ ಸೇವೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಅವರಿಗೆ ಇರುವ ಕಾಳಜಿಯನ್ನು ನಾವೆಲ್ಲ ಮೆಚ್ಚಬೇಕು ಎಂದು ಹೇಳಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ ಕೂಡ ಫೌಂಡೇಶನ್ ಮತ್ತು ಸಮಾಜದಲ್ಲಿ ನಮ್ಮ ಪಾತ್ರದ ಬಗ್ಗೆ ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಷಣ್ಮುಖರಾಜನ್ ಮಾತನಾಡಿ ನಾವು ಹಿಂದೆ ಓದುವಾಗ ಯಾವುದೇ ದಾನಿಗಳು ಸಿಗುತ್ತಿರಲಿಲ್ಲ ಈಗ ಎಲ್ಲವು ಸಿಗುತ್ತಿದೆ ಅದರ ಸದ್ಭಳಕೆ ಬಹು ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟರು. ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ ಸಿ ಆರ್ ಸುರೇಶ ರವರು ನಗು ಫೌಂಡೇಶನ್ ಇಲ್ಲಿಯವರೆಗೆ ಮಾಡಿರುವ ಸಂಪೂರ್ಣ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿದರು.
ಕೊನೆಯಲ್ಲಿ ಅತಿಥಿಗಳನ್ನು ಸನ್ಮಾನಿಸಿ, ಕರಿಮನೆ ಶಾಲೆಯ ಮಕ್ಕಳಿಗೆ ಹಾಗೂ 20 ಶಾಲೆಯ ಮುಖ್ಯಗುರುಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಎಂ ಬಿ ಅಭಿಷೇಕ್, ಸಿ ಆರ್ ಪಿ ಗಳಾದ ಜ್ಯೋತಿ, ರುದ್ರಸ್ವಾಮಿ, ಎಸ್ ಡಿ ಎಂ ಸಿ ಯವರಾದ ಜಯಸುಧಾ, ಸುಂದರ್, ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು. ನಂಜುಂಡಸ್ವಾಮಿ ನಿರೂಪಿಸಿದರೆ, ಅಭಿಷೇಕ್ ಸ್ವಾಗತಿಸಿದರು. ಮಕ್ಕಳು ಪ್ರಾರ್ಥನೆ ಮಾಡಿದರೆ ರಾಜನಾಯ್ಕ ವಂದಿಸಿದರು.
