ಶೃಂಗೇರಿ: ಶ್ರೀಶಾರದಾ ಪೀಠದ ವತಿಯಿಂದ ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮ ಪಂಚಾಯಿತಿಯ ಶ್ರಿವನದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಗೆ ಶ್ರೀಮಠದ ಆರೋಗ್ಯ ನಿಧಿಯಿಂದ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು.

ಜಗತ್ತಿನಾದ್ಯಂತ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಹೆಸರುವಾಸಿಯಾಗಿರುವ ಶೃಂಗೇರಿ ಶ್ರೀ ಶಾರದಾ ಪೀಠವು ಆರೋಗ್ಯ ಕ್ಷೇತ್ರದಲ್ಲಿಯೂ ತನ್ನ ಸೇವಾ ಪರಂಪರೆಯನ್ನು ಮುಂದುವರಿಸಿದ್ದು, ಕೊಪ್ಪ ತಾಲೂಕಿನ ಜನರ ಅನುಕೂಲಕ್ಕಾಗಿ ಈ ಆಂಬುಲೆನ್ಸ್ ಅನ್ನು ಸಮರ್ಪಿಸಿದೆ.
ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಮಠದ ಉದಾರ ಕೊಡುಗೆಯಾಗಿ ಈ ಸೇವೆ ಆರಂಭವಾಗಿದ್ದು, ತಾಲೂಕಿನ ಜನರಿಗೆ ಇದು ಅತ್ಯಂತ ಉಪಯುಕ್ತವಾಗಲಿದೆ.

ಈ ಉಚಿತ ಆಂಬುಲೆನ್ಸ್ ಸೇವೆಯ ಸಂಪೂರ್ಣ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಜವಾಬ್ದಾರಿಯನ್ನು ಶೃಂಗೇರಿ ಕ್ಷೇತ್ರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಜಗದೀಶ್ “ಜಗ್ಗ” ಅವರ ನೇತೃತ್ವದ ತಂಡ ವಹಿಸಿಕೊಂಡಿದೆ. ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಮಯದಲ್ಲಾದರೂ ರೋಗಿಗಳಿಗೆ ಸ್ಪಂದಿಸಲು ತಂಡವು 24 ಗಂಟೆಯೂ ಸಜ್ಜಾಗಿದ್ದು, ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದೆ.
ಸಮಿತಿಗೆ ಆರೋಗ್ಯ ನಿಧಿಯಿಂದ ಆಂಬುಲೆನ್ಸ್ನ್ನು ನೀಡಿದ ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಸಮಿತಿಯು ಧನ್ಯವಾದಗಳನ್ನು ತಿಳಿಸಿದೆ.
ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿಗಳಾದ ಪಿ ಮುರುಳಿ, ಜಗದ್ಗುರುಗಳ ಆಪ್ತಸಹಾಯಕರಾದ ವೇ ಬ್ರ ಶ್ರೀ ಕೃಷ್ಣಮೂರ್ತಿಗಳು, ಹೆಚ್ ಆರ್ ಜಗದೀಶ್ ಗೌರವಾಧ್ಯಕ್ಷರು ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶೃಂಗೇರಿ ಕ್ಷೇತ್ರ, ವಿಜೇಂದ್ರ ಎ ಜಿ ಕಟ್ಟೆ ಕ್ಷೇತ್ರ ಅಧ್ಯಕ್ಷರು, ಚಂದ್ರಶೇಖರ್ ಅಧ್ಯಕ್ಷರು ಆಟೋ ಚಾಲಕರ ಸಂಘ ಶೃಂಗೇರಿ, ರವಿ ಮಾಜಿ ಅಧ್ಯಕ್ಷರು ಆಟೋ ಚಾಲಕರ ಸಂಘ ಶೃಂಗೇರಿ, ಬಿ.ಕೆ. ರಮೇಶ್ ಅಧ್ಯಕ್ಷರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ ಮತ್ತು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಆಟೋ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
