ಕಾರ್ಕಳ; ಇಂದು ಮುಂಜಾನೆ ಕಾರ್ಕಳದ ಸುತ್ತಮುತ್ತ ಧಾರಕಾರ ಮಳೆ ಜೊತೆ ಅಬ್ಬರದ ಸಿಡಿಲಿಗೆ (24) ವರ್ಷದ ಯುವಕ ಮೃತ ಪಟ್ಟಿದ್ದಾನೆ. ಇಂದು ಮುಂಜಾನೆ ಪಾಲಡ್ಕ ನಿವಾಸಿ ಕೂಲಿ ಕಾರ್ಮಿಕ ನಿತಿನ್ ಪೂಜಾರಿ ಕೇಪ್ಲಾಜೆ ಮಾರಿಗುಡಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಷ್ಟು ಮಾತ್ರವಲ್ಲದೇ ಉಡುಪಿಯಲ್ಲಿ ಕಳೆದ ರಾತ್ರಿಯಿಂದ ಸುರಿದ ಮಳೆಯ ಪರಿಣಾಮ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ತರಕಾರಿ ಮಾರುಕಟ್ಟೆಯಲ್ಲಿನ ಮರವೊಂದರ ಕೊಂಬೆ ಇಂದು ಮಧ್ಯಾಹ್ನ ವೇಳೆ ಮುರಿದು ಬಿದ್ದಿದ್ದು, ಇದರಿಂದ ಎರಡು ಅಂಗಡಿಗಳು ಹಾಗೂ ಒಂದು ಕಾರಿಗೆ ಹಾನಿಯಾಗಿದೆ.
ಮಾರುಕಟ್ಟೆಯಲ್ಲಿರುವ ಅಶ್ವಥ ಮರದ ಗೆಲ್ಲು ಮುರಿದು ಬಿದ್ದಿದ್ದು, ಇದರಿಂದ ಮಾರುಕಟ್ಟೆಯಲ್ಲಿರುವ ಶಫೀಕ್ ಎಂಬವರ ತರಕಾರಿ ಅಂಗಡಿ ಹಾಗೂ ಮುಸ್ತಫ್ ಎಂಬವರ ಹಣ್ಣಿನ ಅಂಗಡಿಗೆ ಹಾನಿಯಾಗಿದೆ. ಅದೇ ರೀತಿ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರೊಬ್ಬರ ಕಾರು ಜಖಂಗೊಂಡಿದೆ.ಅಲ್ಲದೆ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಅನಾಹುತದಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬಂದಿ, ಮೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ನಡೆಸಿದರು.
