ಚಿಕ್ಕಮಗಳೂರು: ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ 2 ರಂದು ಲಿಖಿತ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಭಂವರ್ ಸಿಂಗ್ ಮೀನಾ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಅತೀ ಮಹತ್ವದ ಹಿನ್ನೆಲೆ ಹೊಂದಿರುವುದರಿಂದ ಪರೀಕ್ಷಾ ಪ್ರಕ್ರಿಯೆಯನ್ನು ಸುವ್ಯವಸ್ಥಿತವಾಗಿ, ಶಾಂತಿ ಮತ್ತು ಶಿಸ್ತು ಪಾಲನೆಯೊಂದಿಗೆ ಹಾಗೂ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸುವುದು ಅವಶ್ಯವಿರುವ ಹಿನ್ನೆಲೆಯಲ್ಲಿ ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು ನಿಯಮಬದ್ಧವಾಗಿ, ಯಾವುದೇ ಅಹಿತಕರ ಮತ್ತು ಅವ್ಯವಹಾರಗಳಿಗೆ ಆಸ್ಪದವಾಗದಂತೆ ನಡೆಸುವ ಸಲುವಾಗಿ ಪರೀಕ್ಷೆ ಆರಂಭವಾಗುವ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳು ಮತ್ತು ಅವುಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 163 ರನ್ವಯ ಈ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ 3395 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಲಿಖಿತ ಪರೀಕ್ಷೆ ಅಂದು ಬೆಳಿಗ್ಗೆ10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ವಿವರ ಇಲ್ಲಿವೆ:
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಎಸ್.ಟಿ.ಜೆ ಮಹಿಳಾ ಪಿಯು ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ರತ್ನಗಿರಿ ರಸ್ತೆಯ ಎಂ.ಇ.ಎಸ್.ಎಸ್.ಎಸ್.ಎಂ ಪಿಯು ಕಾಲೇಜು, ಬಸವನಹಳ್ಳಿಯ
ಬಾಲಕಿಯರ ಪದವಿ ಪೂರ್ವ ಕಾಲೇಜು, ಆಶ್ರಯ ಆಸ್ಪತ್ರೆ ಹತ್ತಿರದ ಬಾಲಕಿಯರ ಸೆಂಟ್ ಜೋಸೆಫ್ ಪಿಯು ಕಾಲೇಜು, ಐಡಿಎಸ್ಜಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಜ್ಯೋತಿನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ, ಹೌಸಿಂಗ್ ಬೋರ್ಡ್ನ ಬಿ.ಜಿ.ಎಸ್ ಎಕ್ಸ್ಪರ್ಟ್ ಪಿಯು ಕಾಲೇಜು, ಜ್ಯೋತಿನಗರದ ಸೆಂಟ್ ಜೋಸೆಫ್ ಪಿಯು ಕಾಲೇಜು, ಟೌನ್ ಕ್ಯಾಂಟೀನ್ ಹತ್ತಿರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಡೂರಿನ ಸರ್ಕಾರಿ ಪಿಯು ಕಾಲೇಜು, ಕೆ.ಎಂ. ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ ಹೆಸ್ಗಲ್ ರಸ್ತೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಯ್ಸಳ ರಸ್ತೆಯ ಸೆಂಟ್ ಮಾರ್ಥಾಸ್ ಕಾಂಪೋಸೈಟ್ ಪಿಯು ಕಾಲೇಜು ಹಾಗೂ ಕೆ.ಎಂ.ರಸ್ತೆಯ ಒಕ್ಕಲಿಗರ ಸಂಘ ಪಿಯು ಕಾಲೇಜಿನಲ್ಲಿ ಈ ಪರೀಕ್ಷೆಗಳು ನಡೆಯಲಿವೆ.
