ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸುಂದರ ಚಾರಣ ತಾಣಗಳಾದ ಕುದುರೆಮುಖ ಹಾಗೂ ನೇತ್ರಾವತಿ ಪೀಕ್ಗೆ ಹೋಗಬಯಸುವ ಚಾರಣಪ್ರಿಯರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಚಾರಣಿಗರ ಸುರಕ್ಷತೆಯನ್ನು ಪರಿಗಣಿಸಿ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಕಳಸ ಸಮೀಪದ ಸೇತುವೆಯೊಂದರ ಮೇಲೆ ನೀರಿನ ಮಟ್ಟ ತಾತ್ಕಾಲಿಕವಾಗಿ ಏರಿಕೆಯಾಗಿದ್ದರೂ ನಂತರ ಇಳಿಕೆಯಾಗಿದೆ. ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಮಳೆಯ ಪ್ರಮಾಣ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯನ್ನು ಅವಲೋಕಿಸಿ, ಟ್ರೆಕ್ಕಿಂಗ್ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರವಾಸಿಗರಿಗೆ ರದ್ದುಗೊಂಡ ಟ್ರೆಕ್ಕಿಂಗ್ಗೆ ಹಣ ಮರುಪಾವತಿ (ರಿಫಂಡ್) ಮಾಡಲಾಗುವುದು. ಜೊತೆಗೆ, ನೋಂದಾಯಿತ ಟ್ರೆಕ್ಕರ್ಗಳಿಗೆ ಈ ಕುರಿತು ಮಾಹಿತಿ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
